ಎಲ್ಲರಿಗೂ ಆಹಾರ ಧಾನ್ಯ ವಿತರಿಸುವ ಬಗ್ಗೆ ನಿಲುವು ತಿಳಿಸಿ: ಕೇಂದ್ರ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು, ಮೇ 15: ಕೋವಿಡ್ ಸಂಬಂಧ ಕಳೆದ ಬಾರಿಯಂತೆ ಈ ವಾರ್ಷಿಕ ಸಾಲಿನಲ್ಲೂ ಮುಂದಿನ ಎರಡು ತಿಂಗಳು ಪಡಿತರ ಚೀಟಿ ಹೊಂದಿಲ್ಲದವರಿಗೂ ಪಡಿತರ ಧಾನ್ಯಗಳನ್ನು ವಿತರಿಸುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ ನಿಲುವು ವ್ಯಕ್ತಪಡಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಕುರಿತು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಹಾಗೂ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಕಳೆದ ವಾರ್ಷಿಕ ಸಾಲಿನಲ್ಲಿ ಕೇಂದ್ರವು ಆತ್ಮನಿರ್ಭರ ಯೋಜನೆಯಡಿ 5 ಕೆಜಿ ಅಕ್ಕಿ, ಒಂದು ಕೆಜಿ ಬೇಳೆ ವಿತರಣೆ ಮಾಡಿತ್ತು. ಇದೇ ಮಾದರಿಯಲ್ಲಿ ಮೇ ಮತ್ತು ಜೂನ್ ತಿಂಗಳಲ್ಲಿ ಸುಮಾರು 80 ಕೋಟಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪ್ರತಿ ವ್ಯಕ್ತಿಗೆ ತಲಾ 5 ಕೆಜಿ ಅಕ್ಕಿ ವಿತರಿಸುವುದಾಗಿ ಹೇಳಿದೆ. ಆದರೆ, ಇದು ಪಡಿತರ ಚೀಟಿ ಹೊಂದಿರುವವರಿಗೆ ಮಾತ್ರವಾಗಿದ್ದು, ಪಡಿತರ ಚೀಟಿ ಹೊಂದಿಲ್ಲದವರಿಗೆ ಆಹಾರಧಾನ್ಯ ದೊರಕುವುದಿಲ್ಲ. ಆದ್ದರಿಂದ ಅವರಿಗೂ ಸಹ ಆಹಾರ ಧಾನ್ಯ ನೀಡುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ ನಿಲುವು ತಿಳಿಸಬೇಕೆಂದು ಪೀಠ ತಿಳಿಸಿತು.