ಸಿಎಂ ಪುತ್ರನಿಗೆ ದರ್ಶನಕ್ಕೆ ಅವಕಾಶ: ಕ್ಷಮೆಯಾಚಿಸಿದ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ
ಬಿ.ವೈ.ವಿಜಯೇಂದ್ರ ದೇವಸ್ಥಾನಕ್ಕೆ ಆಗಮಿಸಿದ ದೃಶ್ಯ (ಫೈಲ್ ಚಿತ್ರ)
ಮೈಸೂರು,ಮೇ.20: ಮುಖ್ಯಮಂತ್ರಿಯವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಶ್ರೀಶ್ರೀಕಂಠೇಶ್ವರಸ್ವಾಮಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು ತಪ್ಪು ಮಾಡಿದ್ದೇನೆ. ಇದಕ್ಕೆ ಕ್ಷಮೆಯಾಚಿಸುತ್ತೇನೆ. ನನಗೆ ಏನಾದರೂ ಶಿಕ್ಷೆ ಕೊಡಿ ಎಂದು ವ್ಯಕ್ತಿಯೊಬ್ಬರ ಜೊತೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಅವರು ಮಾತನಾಡಿರುವ ಆಡಿಯೋ ವೈರಲ್ ಅಗಿದೆ.
ಬೆಂಗಳೂರಿನ ವ್ಯಕ್ತಿಯೊಬ್ಬರು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ದೂರವಾಣಿ ಕರೆ ಮಾಡಿ 'ನಾನು ಹರಕೆ ಹೊತ್ತುಕೊಂಡಿದ್ದೇನೆ. ಬರುವ ವಾರ ನಂಜನಗೂಡು ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಬೇಕಿದೆ. ಅವಕಾಶ ಮಾಡಿಕೊಡುತ್ತೀರ' ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ರವೀಂದ್ರ ಅವರು, ಇದನ್ನೆ ಹಿಡಿದುಕೊಂಡು ಎಳೆಯಬೇಡಿ, ನನಗೆ ಏನಾದರೂ ಶಿಕ್ಷೆ ಕೊಡಿಸಿ, ಈ ಕೆಲಸ ಸಾಕಾಗಿಬಿಟ್ಟಿದೆ. ಇನ್ನು ಒಂದು ವರ್ಷ ಇದೆ. ವಾಲೆಂಟರಿ ರಿಟೈರ್ಮೆಂಟ್ ತೆಗೆದುಕೊಂಡು ಬಿಡುತ್ತೇನೆ ಎಂದಿದ್ದಾರೆ.
ಇದೊಂದೇ ವಿಚಾರವನ್ನು ಇಟ್ಟುಕೊಂಡು ಏಕೆ ಎಳೆಯುತ್ತೀರಿ, ಅಂತರ್ ಜಿಲ್ಲಾ ಪ್ರವಾಸ ಮಾಡಿಲ್ಲವಾ, ಅದರ ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ನನಗೂ ಸಾಕಾಗಿದೆ. ಕುಕ್ಕೆ ಸುಬ್ರಮಣ್ಯದಲ್ಲಿದ್ದಾಗಲೂ ಇಂತಹ ಸಮಸ್ಯೆಗಳನ್ನು ಎದುರಿಸಿದ್ದೇನೆ. ಇಲ್ಲಿಯೂ ಇಂತಹ ಸಮಸ್ಯೆಗೆ ಸಿಲುಕಿದ್ದೇನೆ. ನನಗೆ ಏನಾದರೂ ಶಿಕ್ಷೆ ಕೊಡಿಸಿ ಎಂದು ಹೇಳಿದ್ದಾರೆ.