ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಡೆಯುತ್ತಿರುವ ಬೆಳವಣಿಗೆಗಳು ನಿಜ ಎಂದ ಸಚಿವ ಆರ್.ಅಶೋಕ್
ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ
ಬೆಂಗಳೂರು, ಮೇ 26: `ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದ ಚಟುವಟಿಕೆಗಳು ನಡೆದಿರುವುದು ನೂರಕ್ಕೆ ನೂರು ನಿಜ. ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಸಚಿವರೂ ಭಾಗಿಯಾಗಿರುವುದು ಸತ್ಯ' ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳುವ ಮೂಲಕ ರಾಜಕೀಯ ಕುತೂಹಲ ಸೃಷ್ಟಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಹೊಸದಿಯಲ್ಲಿ ಕೆಲ ಶಾಸಕರು ಹಾಗೂ ಸಚಿವರು ಇರುವುದು ನಿಜ. ನಿನ್ನೆಯಿಂದ ನಾಯಕತ್ವ ಬದಲಾವಣೆ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯನ್ನು ಗಮನಿಸುತ್ತಿದ್ದೇನೆ' ಎಂದು ಹೇಳಿದರು.
'ನಾಯಕತ್ವ ಬದಲಾವಣೆ ಸಂಬಂಧ ಹಲವು ಸಭೆಗಳು ನಡೆಯುತ್ತಿವೆ. ಕೆಲವರು ಕೆಲವು ಕಡೆ ಪ್ರತ್ಯೇಕ ಸಭೆಗಳು ನಡೆಸುತ್ತಿರೋದು ಗಮನಕ್ಕೆ ಬಂದಿದೆ. ನಾಯಕತ್ವ ಬದಲಾವಣೆ ಬಗ್ಗೆ ಬೆಳವಣಿಗಳು ಆಗುತ್ತಿರುವುದು ಸತ್ಯ. ದಿಲ್ಲಿಗೂ ಕೆಲವು ನಾಯಕರು ಹೋಗಿದ್ದಾರೆ. ಆದರೆ, ನಾನು ಈ ಬೆಳವಣಿಗಳನ್ನು ಪಕ್ಕಕ್ಕೆ ಇಟ್ಟಿದ್ದೇನೆ' ಎಂದು ಅಚ್ಚರಿಯ ಹೇಳಿಕೆ ನೀಡಿದರು.
`ನಾಯಕತ್ವ ಬದಲಾವಣೆ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ನನ್ನ ಆದ್ಯತೆ ಏನಿದ್ದರೂ ಕೊರೋನ ಸೋಂಕು ನಿಯಂತ್ರಣ, ಆಕ್ಸಿಜನ್, ಬೆಡ್ ಕೊಡಿಸೋದು. ಕೊರೋನ ಸೋಂಕು ಹತೋಟಿಗೆ ತರುವ ಕೆಲಸ ಮಾಡ್ತಿದ್ದೇವೆ. ಕೊರೋನ ವಿರುದ್ಧದ ಹೋರಾಟ ನನಗೆ ಮುಖ್ಯವಾಗಿದೆ. ನನ್ನ ಗಮನ ಅತ್ತ ಕಡೆ ಅಷ್ಟೇ ಎಂದು' ಅಶೋಕ್ ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು.