ಭೀಮಾನದಿಯಲ್ಲಿ ಈಜಲು ತೆರಳಿದ್ದ ನಾಲ್ವರು ಮಕ್ಕಳು ನೀರುಪಾಲು: ಬಾಲಕಿಯ ಮೃತದೇಹ ಪತ್ತೆ
ಮೂವರಿಗಾಗಿ ಮುಂದುವರಿದ ಶೋಧ
ವಿಜಯಪುರ, ಮೇ 30: ಭೀಮಾನದಿಯಲ್ಲಿ ಈಜಲು ತೆರಳಿದ್ದ ನಾಲ್ವರು ಮಕ್ಕಳು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಮಹಾರಾಷ್ಟ್ರದ ದಕ್ಷಿಣ ಸೋಲಾಪುರ ತಾಲೂಕಿನ ಲವಗಿ ಗ್ರಾಮದ ಬಳಿ ನಡೆದಿದ್ದು, ಓರ್ವ ಬಾಲಕಿಯ ಮೃತದೇಹ ಪತ್ತೆಯಾಗಿದೆ.
ಲವಗಿ ಗ್ರಾಮದ ಬಳಿ ಭೀಮಾನದಿಯಲ್ಲಿ ನಾಲ್ವರು ಮಕ್ಕಳು ಶನಿವಾರ ಸಂಜೆ ಈಜಲು ತೆರಳಿದ್ದರು. ಈ ಸಂದರ್ಭ ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದೆ.
ಲವಗಿ ಗ್ರಾಮದ ಶಿವಾನಂದ ಪಾರ್ಶೆಟ್ಟಿ ಅವರ ಮಕ್ಕಳಾದ ಆರತಿ(13) ವಿಠ್ಠಲ(10) ಹಾಗೂ ಶಿವಾಜಿ ತಾನವಡೆ ಎಂಬವರ ಮಕ್ಕಳಾದ ಸಮೀಕ್ಷಾ(14), ಅರ್ಪಿತಾ(13) ನೀರುಪಾಲಾದ ಮಕ್ಕಳು. ಈ ಪೈಕಿ ಆರತಿ ಮೃತದೇಹ ಮಾತ್ರ ಪತ್ತೆಯಾಗಿದ್ದು, ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ.
ಕುಟುಂಬಸ್ಥರು ಮನೆ ಕೆಲಸದಲ್ಲಿ ತೊಡಗಿದ್ದಾಗ ಮಕ್ಕಳು ನದಿ ಬಳಿ ಆಟವಾಡಲು ತೆರಳಿದ್ದಾರೆ. ಈ ಸಂದರ್ಭ ಈಜಲು ಇಳಿದಿದ್ದಾರೆ ಎನ್ನಲಾಗಿದ್ದು, ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಮಹಾರಾಷ್ಟ್ರದ ಮಂದ್ರೂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.