ನಾಯಕತ್ವದ ಬಗ್ಗೆ ಕೇಂದ್ರ ನಾಯಕರು ತೀರ್ಮಾನಿಸುತ್ತಾರೆ, ಮಠಾಧೀಶರಲ್ಲ: ಬಿ.ವೈ.ವಿಜಯೇಂದ್ರ
ಬೆಂಗಳೂರು, ಮೇ 31: ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವದ ಬಗ್ಗೆ ಕೇಂದ್ರ ನಾಯಕರು ತೀರ್ಮಾನಿಸುತ್ತಾರೆ. ಈ ಬಗ್ಗೆ ಯಾವುದೇ ಮಠಾಧೀಶರು ನಿರ್ಧಾರ ಮಾಡುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರು ಫೇಸ್ಬುಕ್ನಲ್ಲಿ ಸಿಎಂ ಯಡಿಯೂರಪ್ಪ ಕುಟುಂಬದವರು ವೀರಶೈವ ಲಿಂಗಾಯತ ಮಠಾಧೀಶದ ಬೆಂಬಲ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಆರೋಪ ಮಾಡಿ ಪೋಸ್ಟ್ ಮಾಡಿದ್ದ ವಿಚಾರವಾಗಿ ಬಿ.ವೈ.ವಿಜಯೇಂದ್ರ ಅವರು ಈಗಾಗಲೇ ಕೇಂದ್ರ ನಾಯಕರು ರಾಜ್ಯದಲ್ಲಿ ನಡೆಯುತ್ತಿರುವ ಘಟನಾವಳಿಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದ್ದಾರೆ. ಯಾವುದು ಸರಿ, ತಪ್ಪು ಅನ್ನುವ ಅರಿವು ಕೇಂದ್ರ ನಾಯಕರಿಗಿದೆ. ಏನೇ ಇದ್ದರೂ ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸದ್ಯ ಜಾರಿಯಲ್ಲಿರುವ ಲಾಕ್ಡೌನ್ನಿಂದ ಶೇ.50ರಷ್ಟು ಸೋಂಕು ಕಡಿಮೆಯಾಗಿದೆ. ಲಾಕ್ಡೌನ್ ಇನ್ನೂ ಸ್ವಲ್ಪ ದಿನ ಮುಂದುವರೆಸಿದರೆ ಒಳ್ಳೆಯದು. ಬಳಿಕ ಹಂತಹಂತವಾಗಿ ಲಾಕ್ಡೌನ್ ತೆರವು ಮಾಡಬೇಕು. ರಾಜ್ಯದಲ್ಲಿ ಕೊರೋನದಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ. ತಜ್ಞರ ಅಭಿಪ್ರಾಯದಂತೆ ಸಿಎಂ ಯಡಿಯೂರಪ್ಪ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಎಂದು ತಿಳಿಸಿದರು.