ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ: ಪ್ರಕರಣ ದಾಖಲು
ಮಡಿಕೇರಿ ಜೂ.5 : ಅಪರಿಚಿತ ವ್ಯಕ್ತಿಯೊಬ್ಬ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಶಾಸಕರ ಸ್ನೇಹಿತರಿಗೆ 30 ಸಾವಿರ ರೂ. ಹಣವನ್ನು ನೀಡುವಂತೆ ಸಂದೇಶ ಕಳುಹಿಸಿದ ಕುರಿತು ಪ್ರಕರಣ ದಾಖಲಾಗಿದೆ. ಶಾಸಕರ ಆಪ್ತ ಸಹಾಯಕ ರವಿ ಅವರು ಮಡಿಕೇರಿ ನಗರ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.
ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಅವರು 5 ಬಾರಿ ಬಿಜೆಪಿ ಶಾಸಕರಾಗಿದ್ದು, ಅವರು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ರಾಷ್ಟ್ರಪತಿ ಕೋವಿಂದ್ ಅವರೊಂದಿಗೆ ಇರುವ ಫೋಟೋವನ್ನು ಫೇಸ್ ಬುಕ್ ಪೇಜ್ನಲ್ಲಿ ಹಾಕಿಕೊಂಡಿದ್ದರು. ಈ ನಡುವೆ ಅಪರಿಚಿತ ದುಷ್ಕರ್ಮಿಯೊಬ್ಬ ಈ ಫೋಟೋವನ್ನು ಬಳಸಿಕೊಂಡು ಅಪ್ಪಚ್ಚು ರಂಜನ್ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದಾನೆ.
ಮಾತ್ರವಲ್ಲದೇ “ಅಪ್ಪಚ್ಚು ರಂಜನ್, ಶಾಸಕರು ಕರೀಂಪುರ ಪಶ್ಚಿಮ ಬಂಗಾಳ” ಎಂದು ಶಾಸಕರ ಕ್ಷೇತ್ರ ಮತ್ತು ರಾಜ್ಯವನ್ನೇ ಬದಲಿಸಿದ್ದಾನೆ. ಅಷ್ಟಕ್ಕೂ ಸುಮ್ಮನಾಗದ ಅಚರಿಚಿತ ವ್ಯಕ್ತಿ, ಶಾಸಕ ಅಪ್ಪಚ್ಚು ರಂಜನ್ ಅವರ ಸ್ನೇಹಿತರಿಗೆ ಸಂದೇಶ ಕಳುಹಿಸಿ ತನ್ನ ಗೂಗಲ್ ಪೇ ಖಾತೆಗೆ 30 ಸಾವಿರ ರೂ. ಹಣ ಹಾಕುವಂತೆ ಮನವಿ ಮಾಡಿದ್ದಾನೆ. ಹಣವನ್ನು 8018453593 ಈ ಸಂಖ್ಯೆಗೆ ಹಣ ಸಂದಾಯ ಮಾಡುವಂತೆಯೂ ಹೇಳಿದ್ದಾನೆ.
ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ತಕ್ಷಣ ಶಾಸಕರ ಆಪ್ತ ಸಹಾಯಕ ಆರ್.ಡಿ. ರವಿ ಅವರು ಮಡಿಕೇರಿ ನಗರ ಠಾಣೆಗೆ ಆಗಮಿಸಿ, ದುಷ್ಕರ್ಮಿ ವಿರುದ್ದ ಲಿಖಿತ ದೂರು ದಾಖಲಿಸಿದ್ದಾರೆ.