ಕೋವಿಡ್ 3ನೇ ಅಲೆ ಎದುರಿಸಲು 1,500 ಕೋಟಿ ರೂ. ವೆಚ್ಚದಲ್ಲಿ ಆರೋಗ್ಯ ಮೂಲ ಸೌಲಭ್ಯ: ಅಶ್ವತ್ಥನಾರಾಯಣ
ಬೆಂಗಳೂರು, ಜೂ.7: ಸಂಭವನೀಯ ಕೋವಿಡ್ ಮೂರನೆ ಅಲೆ ಸೇರಿ ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೇ ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ರಾಜ್ಯವನ್ನು ಸರ್ವಸಜ್ಜುಗೊಳಿಸಲು ತಕ್ಷಣವೇ ಮುಂದಾಗಿರುವ ರಾಜ್ಯ ಸರಕಾರವು 1,500 ಕೋಟಿ ರೂ. ವೆಚ್ಚದಲ್ಲಿ ಜಾಗತಿಕ ಆರೋಗ್ಯ ಮೂಲಸೌಲಭ್ಯ ಕಲ್ಪಿಸಲು ಮುಂದಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು
ಸೋಮವಾರ ನಗರದಲ್ಲಿ ನಡೆದ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾರ್ಯಪಡೆ ಅಧ್ಯಕ್ಷರೂ ಆದ ಅಶ್ವತ್ಥನಾರಾಯಣ ಮಾಧ್ಯಮಗೋಷ್ಠಿಯಲ್ಲಿ ಪ್ರಕಟಿಸಿದರು. 3 ತಿಂಗಳಲ್ಲಿ ಯೋಜನೆ ಸಂಪೂರ್ಣವಾಗಿ ಅನುಷ್ಠಾನವಾಗಲಿದೆ ಎಂದರು.
ಸಭೆಯ ನಿರ್ಣಯಗಳು: 146 ತಾಲೂಕು ಹಾಗೂ 16 ಜಿಲ್ಲಾಸ್ಪತ್ರೆಗಳು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಸಮಾನವಾಗಿ ಇನ್ನು 3 ಆಸ್ಪತ್ರೆಗಳ ಸೌಲಭ್ಯಗಳನ್ನು ಆಮೂಲಾಗ್ರವಾಗಿ ಅಭಿವೃದ್ಧಿಪಡಿಸುವ ಕ್ರಿಯಾ ಯೋಜನೆ ಇದು. ಇಡೀ ವ್ಯವಸ್ಥೆಯನ್ನು ತಾಂತ್ರಿಕವಾಗಿ ಸಂಪೂರ್ಣ ಮೇಲ್ದರ್ಜೆಗೇರಿಸಲಾಗುವುದು.
ಪ್ರಾಥಮಿಕ ಮಟ್ಟದಿಂದ ಜಿಲ್ಲಾ ಆಸ್ಪತ್ರೆವರೆಗೂ ಆರೋಗ್ಯ ಕ್ಷೇತ್ರದ ಮೂಲಸೌಕರ್ಯದಲ್ಲಿ ಆಮೂಲಾಗ್ರ ಸುಧಾರಣೆ ತರಲಾಗುವುದು. ಪ್ರತೀ ತಾಲೂಕು ಆಸ್ಪತ್ರೆಯಲ್ಲೂ ಒಟ್ಟು 100 ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು. ಇಷ್ಟೂ ಹಾಸಿಗೆಗಳ ಪೈಕಿ 25 ಐಸಿಯು, 25 ಎಚ್ಡಿಯು ಹಾಗೂ 50 ಆಕ್ಸಿಜನ್ ಹಾಸಿಗೆಗಳಿರುತ್ತವೆ. ಜತೆಯಲ್ಲಿಯೇ ವೆಂಟಿಲೇಟರ್ ಗಳು ಇರುತ್ತವೆ. ರಿಮೋಟ್ ಐಸಿಯುಗಳ ಜತೆಗೆ ಎಲ್ಲ ರೀತಿಯ ಡಯಾಗ್ನಾಸ್ಟಿಕ್ ಸೌಲಭ್ಯವನ್ನೂ ಒದಗಿಸಲಾಗುವುದು. ಈ ಇಡೀ ವ್ಯವಸ್ಥೆಯನ್ನು ನಿರ್ವಹಿಸಲು ಬೇಕಾದ ಎಲ್ಲ ನುರಿತ ಸಿಬ್ಬಂದಿಯನ್ನು ಸಮರೋಪಾದಿಯಲ್ಲಿ ನೇಮಕ ಮಾಡಿಕೊಳ್ಳಲಾಗುವುದು.
ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾಸ್ಪತ್ರೆ ತನಕ ಇಷ್ಟೆಲ್ಲ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಲು ಕೊನೆ ಪಕ್ಷ 4 ಸಾವಿರ ವೈದ್ಯರ ಅಗತ್ಯವಿದೆ. ಒಬ್ಬ ವೈದ್ಯರಿಗೆ ಮೂವರು ನರ್ಸ್ ಗಳಂತೆ, ಒಬ್ಬ ವೈದ್ಯರಿಗೆ ಗ್ರೂಪ್ ʼಡಿʼ ಮೂವರು ಸಿಬ್ಬಂದಿ ಅಗತ್ಯ. ಮೂಲಸೌಲಭ್ಯ ಮತ್ತು ಸಿಬ್ಬಂದಿ ವೇತನ ಸಲುವಾಗಿ 1,500 ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ ವಾರ್ಷಿಕ 600 ಕೋಟಿ ರೂ. ವೇತನ ಹೊರತುಪಡಿಸಿದರೆ ಮಿಕ್ಕ ಬಹುತೇಕ ವೆಚ್ಚ ಒಮ್ಮೆಯಷ್ಟೇ ಆಗುವಂಥದ್ದು. ಉಳಿದಂತೆ ಕಟ್ಟಡ, ಆಕ್ಸಿಜನ್ ಜನರೇಟರ್, ವೆಂಟಿಲೇಟರ್, ಯಂತ್ರೋಪಕರಣ ಇತ್ಯಾದಿ ಸೇರಿ 800 ಕೋಟಿ ರೂ. ವೆಚ್ಚ ಆಗಲಿದೆ. ಈ ಕುರಿತ ಅಂದಾಜು ವೆಚ್ಚದ ವಿವರಗಳನ್ನು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಭೆಯಲ್ಲಿ ಮಂಡಿಸಿದ್ದು, ಪ್ರಸ್ತಾವನೆಗೆ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ಯಾರೂ ತಮ್ಮ ತಾಲೂಕು ಬಿಟ್ಟು ಆಚೆ ಬರಬಾರದು. ಜಿಲ್ಲಾ ಮಟ್ಟದಲ್ಲೇ ಶೇ.97ರಷ್ಟು ಆರೋಗ್ಯ ಸೇವೆ ಸಿಗಬೇಕು. ಸರಕಾರಿ ಆಸ್ಪತ್ರೆ ಎಂದರೆ, ನಿರ್ವಹಣೆ ಮತ್ತು ಗುಣಮಟ್ಟದಲ್ಲಿ ಕೊರತೆ ಆಗಬಾರದು. ಇದು ಸರಕಾರದ ಉದ್ದೇಶ. ಇದಕ್ಕಾಗಿ ತಾಂತ್ರಿಕ ಸಲಹಾ ಸಮಿತಿ ರಚನೆ ಮಾಡಲಾಗಿದ್ದು, ಬಿಸಿಜಿ (ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್) ನಮಗೆ ಉಚಿತವಾಗಿ ತಾಂತ್ರಿಕ ನೆರವು ನೀಡುತ್ತಿದೆ.