ಪಿಯುಸಿ ಪರೀಕ್ಷೆ ರದ್ದು: ಹೈಕೋರ್ಟ್ ಮೆಟ್ಟಿಲೇರಿದ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು
ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.8: ಕೊರೋನ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸದಿರಲು ಕ್ರಮ ಕೈಗೊಂಡ ಬೆನ್ನಲ್ಲೇ ಕಳೆದ ವರ್ಷ ಪಿಯುಸಿಯಲ್ಲಿ ಅನುತ್ತೀರ್ಣಗೊಂಡ ಅಥವಾ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳು ಈಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಎಸ್.ವಿ.ಸಿಂಗ್ರೇಗೌಡ ಎಂಬುವವರ ಪರವಾಗಿ ವಕೀಲರಾದ ಆರ್.ಪಿ.ಸೋಮಶೇಖರಯ್ಯ ಹಾಗೂ ಆರ್.ಎಲ್.ರಂಗ ಸ್ವಾಮ್ಯ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಈ ವರ್ಷ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಿ ಮುಂದಿನ ತರಗತಿಗೆ ಹೋಗುತ್ತಿರುವಾಗ ತಾವು ಮಾತ್ರ ಪುನಃ ಪರೀಕ್ಷೆ ಬರೆದು ಫಲಿತಾಂಶವನ್ನು ಕಾಯುವಂತಾಗುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಈ ವಿದ್ಯಾರ್ಥಿಗಳ ಪ್ರಶ್ನೆಯಾಗಿದ್ದು, ಈ ವಿಚಾರವನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ರಿಪೀಟರ್ಸ್ ವಿದ್ಯಾರ್ಥಿಗಳು ಸುಮಾರು 95 ಸಾವಿರ ವಿದ್ಯಾರ್ಥಿಗಳು ಇದ್ದು, ಅವರಿಗೆ ಸರಕಾರದ ಈ ದ್ವಂದ್ವ ನಿಲುವಿನಿಂದ ತೊಂದರೆಯಾಗಿದೆ. ರೆಗ್ಯುಲರ್ ವಿದ್ಯಾರ್ಥಿಗಳಿಗೆ ಒಂದು ನ್ಯಾಯ, ರಿಪೀಟರ್ಸ್ಗೆ ಇನ್ನೊಂದು ನ್ಯಾಯ ಏಕೆ ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ಪರೀಕ್ಷೆ ರದ್ದು ಮಾಡಿದರೆ ಎಲ್ಲ ವಿದ್ಯಾರ್ಥಿಗಳಿಗೂ ರದ್ದು ಮಾಡಿ, ಇಲ್ಲದಿದ್ದರೆ ಎಲ್ಲರಿಗೂ ಪರೀಕ್ಷೆ ನಡೆಸಿ ಎಂದು ಅರ್ಜಿದಾರರು ಕೋರಿದ್ದಾರೆ.