ನನ್ನ ಮೇಲೆ ಸಿಂಧೂರಿ ಮಾಡಿರುವ ಆರೋಪ ಸಾಬೀತಾಗುವವರೆಗೂ ಧರಣಿ: ಶಾಸಕ ಸಾ.ರಾ.ಮಹೇಶ್
ಮೈಸೂರು,ಜೂ.9: ಮೈಸೂರು ಜಿಲ್ಲೆ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ನನ್ನ ಮೇಲೆ ಮಾಡಿರುವ ಆರೋಪ ಸಾಬೀತಾಗುವವರೆಗೂ ಜೂ.10ರ ಗುರುವಾರದಿಂದ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಶಾಸಕ ಸಾ.ರಾ.ಮಹೇಶ್ ತಿಳಿಸಿದ್ದಾರೆ.
ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಖಾಸಗಿ ವೆಬ್ಸೈಟ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ 'ದಟ್ಟಗಳ್ಳಿಯಲ್ಲಿ ನನ್ನ ಪತ್ನಿಯವರ ಹೆಸರಿನಲ್ಲಿರುವ ಸಾ.ರಾ.ಚೌಲ್ಟ್ರಿಯೂ ರಾಜಕಾಲುವೆ ಮೇಲೆ ನಿರ್ಮಾಣಗೊಂಡಿದೆ' ಎಂದು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ವಾಸ್ತವವಾಗಿ ರಾಜಕಾಲುವೆ ಮೇಲೆ ನಿರ್ಮಾಣವಾಗಿದ್ದಾರೆ ಸದರಿ ಚೌಲ್ಟ್ರಿಯನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳತಕ್ಕದ್ದು. ಜೊತೆಗೆ ಇದು ಸತ್ಯ ಎಂದು ಸಾಬೀತಾದರೆ ನಾನು ಸಾರ್ವಜನಿಕ ಜೀವನದಿಂದಲೇ ನಿವೃತ್ತಿ ಘೋಷಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಈ ಆರೋಪ ಸುಳ್ಳಾದರೆ ರೋಹಿಣಿ ಸಿಂಧೂರಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಈ ವಿಚಾರ ಇತ್ಯರ್ಥ ಆಗುವವರೆಗೆ ಜೂ.10 ರ ಗುರುವಾರ ಬೆಳಗ್ಗೆ 10.30 ಗಂಟೆಯಿಂದ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ನಾನೊಬ್ಬನೇ ಧರಣಿ ನಡೆಸುವುದಾಗಿ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.