ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಬಾರದು: ಸಿ.ಪಿ.ಯೋಗೇಶ್ವರ್ ವಿರುದ್ಧ ಸಚಿವ ಬಿ.ಸಿ.ಪಾಟೀಲ್ ಕಿಡಿ
ಮೈಸೂರು, ಜೂ.16: ಸಚಿವ ಸಿ.ಪಿಯೋಗೇಶ್ವರ್ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಬಾರದು. ಇರುವುದನ್ನು ಸರಿಯಾಗಿ ಹೇಳಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕಿಡಿಕಾರಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತಮಾಡಿದ ಅವರು, ಇದು ನಾಯಕತ್ವ ಬದಲಾವಣೆ ಸಮಯವಲ್ಲ, ಪರ-ವಿರೋಧ ಸಹಿ ಸಂಗ್ರಹವೂ ಸರಿಯಿಲ್ಲ, ಯೋಗೇಶ್ವರ್ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಬಾರದು ಎಂದು ಹೇಳಿದರು.
ಇಂದು ಸಂಜೆ 5 ಗಂಟೆಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಭೆ ಕರೆದಿದ್ದಾರೆ. ನಾನು ಸಭೆಗೆ ಹೋಗುತ್ತೇನೆ. ಪ್ರತ್ಯೇಕ ಅಭಿಪ್ರಾಯ ಸಂಗ್ರಹಿಸುತ್ತಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಸಿದರು.
ಹೊರಗಿನಿಂದ ಬಂದವರಿಂದಲೇ ಗೊಂದಲ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಗ ಆ ಪ್ರಶ್ನೆ ಉದ್ಬವಿಸುವುದಿಲ್ಲ, ಈಶ್ವರಪ್ಪ ಮೊದಲಿನಿಂದಲೂ ನಮ್ಮ ಪರವೇ ಮಾತನಾಡುತ್ತಿದ್ದಾರೆ. ಮನೆಗೆ ಸೊಸೆ ಬಂದ ಮೇಲೆ ಅವಳೂ ಮನೆ ಮಗಳೇ. ನಮ್ಮಲ್ಲಿ ಗೊಂದಲ ಇಲ್ಲ. ಅರುಣ್ ಸಿಂಗ್ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ನಮ್ಮಲ್ಲಿ ಗೊಂದಲಗಳಿದ್ದರೆ ಬಗೆಹರಿಸಲಿದ್ದಾರೆ ಎಂದು ಹೇಳಿದರು.
ಪರ - ವಿರೋಧ ಸಹಿ ಸಂಗ್ರಹದಲ್ಲಿ ಯಾರು ನನ್ನನ್ನು ಸಂಪರ್ಕಿಸಿಲ್ಲ ಎಂದು ಹೇಳಿದರು.