2023ರಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ: ಮಾಜಿ ಸಿಎಂ ಕುಮಾರಸ್ವಾಮಿ
ಮಂಡ್ಯ, ಜೂ.17: ರಾಜ್ಯದ ಸಂಪತ್ತನ್ನು ಲೂಟಿ ಮಾಡಿರುವ ರಾಜ್ಯ ಬಿಜೆಪಿ ಸರಕಾರ ಕೇಂದ್ರಕ್ಕೆ ಕೊಡಬೇಕಾಗಿರುವ ಕಪ್ಪ ತೆಗೆದುಕೊಂಡು ಹೋಗಲು ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಬಂದಿರೋದೆ ಹೊರತು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮದ್ದೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಲಾಕ್ ಡೌನ್ ಹಿನ್ನೆಲೆಯಿಂದಾಗಿ ತಾಲೂಕಿನ ಕೊರೋನ ವಾರಿಯರ್ಸ್ ಮತ್ತು ಆರ್ಥಿಕವಾಗಿ ಹಿಂದುಳಿದ 7000 ಸಾವಿರ ಕುಟುಂಬಗಳಿಗೆ ಆಹಾರ ಪದಾರ್ಥಗಳ ವಿತರಣಾ ಕಾರ್ಯಕ್ರಮಕ್ಕೆ ನೀಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದರು.
ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಸಣ್ಣ ಪುಟ್ಟ ಪಾಳೆಗಾರರ ಬಳಿ ವಸೂಲಿ ಮಾಡುತ್ತಿದ್ದಂತಹ ಕೆಲಸವನ್ನು ಈ ಉಸ್ತುವಾರಿಗಳು ಮಾಡುತ್ತಿದ್ದಾರೆ. ಇದು ನಮ್ಮ ನಾಡಿನ ಅತ್ಯಂತ ದೌರ್ಭಾಗ್ಯದ ಸಂಗತಿ. ಈ ಸಂಸ್ಕೃತಿ ಹಿಂದಿನಿಂದಲೂ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷದಲ್ಲಿದೆ. ನಮ್ಮ ಜನ ಬುದ್ದಿವಂತರಾಗದೆ ಇದ್ದರೆ ನಿಮ್ಮ ಸಂಪತ್ತನ್ನು ರಾಷ್ಟ್ರೀಯ ಪಕ್ಷಗಳು ಲೂಟಿ ಮಾಡುತ್ತಲೆ ಇರುತ್ತವೆ ಎಂದು ಅವರು ಟೀಕಿಸಿದರು.
ಜೆಡಿಎಸ್ ಪಕ್ಷವನ್ನು ಅಷ್ಟು ಸುಲಭವಾಗಿ ನಾಡಿನಿಂದ ಮರೆ ಮಾಡುವುದಕ್ಕೆ ಆಗುವುದಿಲ್ಲ. 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಅವರು ಹೇಳಿಕೊಂಡರು.
ಜೆಡಿಎಸ್ ಪಕ್ಷ ಹೋರಾಟ ಮಾಡುತ್ತಿರುವುದು ಅಧಿಕಾರಕೊಸ್ಕರ ಅಲ್ಲ, ನಿಮ್ಮ ಗೌರವಯುತ ಬದುಕಿಗಾಗಿ ಮತ್ತು ನಾಡಿನ ಸಮಸ್ಯೆ ಬಗೆಹರಿಸಲು ನಾವು ಪ್ರಾಮಾಣಿಕವಾಗಿ ಹೋರಾಡುತ್ತಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಪಕ್ಷದಲ್ಲಿ ಕುಟುಂಬ ರಾಕ್ಷಸ ರಾಜಕಾರಣ ಇದೆ ಎಂದು ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ಗೆ ಜೆಡಿಎಸ್ನಲ್ಲಿ ಕುಟುಂಬ ರಾಜಕೀಯ ಇದೆ ಎನ್ನೋದು ಗೊತ್ತಿರಲಿಲ್ವ. ನಮ್ಮ ಪಕ್ಷದ ಅಭ್ಯರ್ಥಿ ಆಗುವ ಮೊದಲು ಗೊತ್ತಿರಲಿಲ್ವ ಎಂದು ಪ್ರಶ್ನೆ ಮಾಡಿದರು.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿರುವ ಕಲಬೆರಕೆ ಹಗರಣವನ್ನು ಉನ್ನತ ತನಿಖೆಗೆ ಆದೇಶಿಸಬೇಕು. ಈ ಹಗರಣ ಸುಮಾರು ಹದಿನೈದು ವರ್ಷಗಳಿಂದ ನಿರಂತರ ನಡೆಯುತ್ತಿದೆ ಎಂಬ ಮಾಹಿತಿ ನನಗೆ ಸಿಕ್ಕಿದೆ. ನನ್ನ ಆಪ್ತ ಕಾರ್ಯದರ್ಶಿಯ ಮೇಲೆ ಕೆಲವರು ಆರೋಪ ಮಾಡ್ತಿದ್ದಾರೆ. ನನ್ನ ಆಪ್ತ ಕಾರ್ಯದರ್ಶಿ ಈ ಹಗರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಮಾತುಗಳು ಸತ್ಯಕ್ಕೆ ದೂರವಾದದ್ದು. ನಮ್ಮ ಕುಟುಂಬ ಯಾವುದೇ ಕಾರಣಕ್ಕೂ ರೈತರ ರಕ್ತ ಹೀರಿ ಬದುಕು ನಡೆಸೋಲ್ಲ. ನಾವು ಮತ್ತು ನಮ್ಮ ಕುಟುಂಬ ಯಾವಾಗಲೂ ರೈತರ ಬೆನ್ನೆಲುಬಾಗಿ ನಿಂತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಕ್ಷೇತ್ರದ ಶಾಸಕ ಡಿ.ಸಿ ತಮ್ಮಣ್ಣ ಮಾತನಾಡಿದರು.
ಶಾಸಕ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ಮನ್ ಮುಲ್ ಅಧ್ಯಕ್ಷ ರಾಮಚಂದ್ರು, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಪುರಸಭಾ ಅಧ್ಯಕ್ಷ ಸುರೇಶ್ ಕುಮಾರ್ ಸೇರಿದಂತೆ ಹಲವು ಮುಖಂಡರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.