ಚಿತ್ರರಂಗದಲ್ಲಿರುವ ಅನ್ಯಾಯ, ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಲಿ: ರಕ್ಷಿತ್ ಶೆಟ್ಟಿಗೆ ನಟ ಚೇತನ್ ಸವಾಲು
ಬೆಂಗಳೂರು, ಜೂ.18: ಕನ್ನಡ ಚಿತ್ರರಂಗದ ನಟ ರಕ್ಷಿತ್ ಶೆಟ್ಟಿ ಅವರು ಇತ್ತೀಚಿಗೆ ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದು, ಇದಕ್ಕೆ ತಿರುಗೇಟು ನೀಡಿರುವ ಚೇತನ್, 'ಅವರು ಸಿನಿಮಾ ರಂಗದಲ್ಲಿರುವ ಅನ್ಯಾಯದ ಬಗ್ಗೆ ಹೇಳಲಿ. ಇಲ್ಲಿರುವ ಭೇದಭಾವ, ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಲಿ’ ಎಂದು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಚೇತನ್, ‘ರಕ್ಷಿತ್ ನನ್ನ ವಿರುದ್ಧ ಏನೂ ಹೇಳಿಲ್ಲ. ಅವರಿಗೆ ಹೇಳುವ ಹಕ್ಕಿದೆ. ತಪ್ಪಿದ್ದರೆ ತಿದ್ದುಕೊಳ್ಳುತ್ತೇನೆ. ಅದೇ ರೀತಿಯಲ್ಲಿ ಅವರು ಸಿನಿಮಾ ರಂಗದಲ್ಲಿರುವ ಅನ್ಯಾಯದ ಬಗ್ಗೆ ಹೇಳಲಿ. ಇಲ್ಲಿರುವ ಭೇದ ಭಾವ, ಲೈಂಗಿಕ ಕಿರುಕುಳದ ಬಗ್ಗೆ ಹೇಳಲಿ. ಸಿನಿಮಾ ರಂಗದ ಪ್ರತಿಯೊಬ್ಬರು ಈ ಬಗ್ಗೆ ಮಾತನಾಡಲಿ’ ಎಂದು ತಿಳಿಸಿದ್ದಾರೆ.
ಇತ್ತೀಚಿಗೆ ಲೇಖನವೊಂದಕ್ಕೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ರಕ್ಷಿತ್ ಶೆಟ್ಟಿ 'ಕೆಟ್ಟ ಸುಳ್ಳುಗಳಿಂದ ಕೆಡುಕನ್ನು ಬಿತ್ತುತ್ತಿರುವ ನಿಮ್ಮ ಮನಸ್ಸನ್ನು ಪರಿಶುದ್ಧಗೊಳಿಸಬೇಕಾಗಿದೆ' ಎಂದು ಚೇತನ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.