ಟ್ವಿಟರ್ ನಲ್ಲಿ 'ಕೇಂದ್ರ ಸರ್ಕಾರ'ದ ಬದಲು ‘ಒಕ್ಕೂಟ ಸರ್ಕಾರ’ ಎಂದು ಬರೆದ ಮಾಜಿ ಪ್ರಧಾನಿ ದೇವೇಗೌಡ
ಬೆಂಗಳೂರು, ಜೂ.25: ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಕಾಶ್ಮೀರದ ನಾಯಕರೊಂದಿಗೆ ನಡೆಸುತ್ತಿರುವ ಸರ್ವಪಕ್ಷ ಸಭೆಗಳ ಕುರಿತು ಟ್ವೀಟ್ ಮಾಡಿರುವ ಮಾಜಿ ಪ್ರಧಾನಿ ದೇವೇಗೌಡ ಅವರು, ಕೇಂದ್ರ ಸರ್ಕಾರ ಎಂಬುದರ ಬದಲಿಗೆ ‘ಒಕ್ಕೂಟ ಸರ್ಕಾರ’ ಎಂದು ಉಲ್ಲೇಖಿಸಿದ್ದಾರೆ.
ಕೇಂದ್ರ ಸರ್ಕಾರ ಎಂಬುದರ ಬದಲಿಗೆ ಒಕ್ಕೂಟ ಸರ್ಕಾರ ಎಂದು ಕರೆಯಲು, ಪತ್ರಗಳಲ್ಲಿ ಉಲ್ಲೇಖಿಸಲು ತಮಿಳುನಾಡು ಸರಕಾರ ನಿರ್ಧಾರ ಕೈಗೊಂಡಿದ್ದು, ಈ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ದೇವೇಗೌಡ ಅವರು ‘ಒಕ್ಕೂಟ ಸರ್ಕಾರ‘ ಎಂಬ ಪದ ಬಳಸಿದ್ದಾರೆ.
''ಒಕ್ಕೂಟ ಸರಕಾರ (Union Government) ಮತ್ತು ಜಮ್ಮು ಕಾಶ್ಮೀರದ ನಾಯಕರ ನಡುವಿನ ಸಂವಾದವು ಉತ್ತಮ ರೀತಿಯಲ್ಲಿ ನಡೆದಿರುವುದು ತಿಳಿದು ನನಗೆ ಸಂತೋಷವಾಯಿತು. ರಾಜ್ಯದ ಸ್ಥಾನಮಾನ ಪುನರ್ ಸ್ಥಾಪನೆ, ವಿಧಾನಸಭಾ ಚುನಾವಣೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸ್ಪಷ್ಟವಾದ ವಿಚಾರ ವಿನಿಮಯ ಸಭೆಯಲ್ಲಿ ನಡೆದಿದೆ. ಜಮ್ಮು ಕಾಶ್ಮೀರದ ಜನ ಶಾಂತಿ, ಪ್ರಗತಿ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಲು ಅರ್ಹರು'' ಎಂದು ದೇವೇಗೌಡ ಅವರು ಟ್ವೀಟ್ ಮಾಡಿದ್ದಾರೆ.
Am happy to learn that the dialogue between the Union government and leaders of J&K went well, and there was a frank exchange of ideas on a number of issues including restoration of statehood and assembly polls. The people of J&K deserve peace, progress and democracy.
— H D Devegowda (@H_D_Devegowda) June 24, 2021