ಸಂಸದ ಪ್ರತಾಪ್ ಸಿಂಹ ಗೂಂಡಾ, ಶೋಕಿಲಾಲ: ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ವಾಗ್ದಾಳಿ
"ಇಂತಹ ವ್ಯಕ್ತಿಯಿಂದ ಮೈಸೂರಿನ ಜನ ವಿವೇಕ ಕಲಿಯಬೇಕಿಲ್ಲ"
ಮೈಸೂರು,ಜು.3: ಸಂಸದ ಪ್ರತಾಪ್ ಸಿಂಹ ಗೂಂಡಾ, ಶೋಕಿಲಾಲ ಇಂತಹ ವ್ಯಕ್ತಿಯಿಂದ ಮೈಸೂರಿನ ಜನ ವಿವೇಕ ಕಲಿಯಬೇಕಾದ ಅಗತ್ಯವಿಲ್ಲ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ವಾಗ್ದಾಳಿ ನಡೆಸಿದರು.
ನಗರದ ಎನ್ಟಿಎಂ ಶಾಲೆ ಉಳಿವಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಶನಿವಾರ ಪಾಲ್ಗೊಂಡ ಅವರು, ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ನಿನ್ನೆ ಸಂಸದ ಪ್ರತಾಪ್ ಸಿಂಹ ಅವರು ಎನ್ಟಿಎಂ ಶಾಲೆ ಪರವಾಗಿ ಹೋರಾಟ ಮಾಡುತ್ತಿರುವವರಿಗೆ ವಿವೇಕ ಇಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರೊ.ಮಹೇಶ್ ಚಂದ್ರಗುರು, ಸಂಸದ ಪ್ರತಾಪ್ ಸಿಂಹನಿಂದ ಮೈಸೂರಿನ ಜನ ವಿವೇಕ ಕಲಿಯಬೆಕಿಲ್ಲ. ಈಗ ರೈತರು, ಕಾರ್ಮಿಕರ ಮತ ಪಡೆದು ಗೆಲುವು ಸಾಧಿಸಿಲ್ಲ, ಜಾತಿ ಸಂಘರ್ಷದ ಮೇಲೆ ಗೆಲವು ಸಾಧಿಸಿದ್ದಾನೆ. ಈತನಿಗೆ ಮೈಸೂರಿನ ಇತಿಹಾಸ ಗೊತ್ತಿಲ್ಲ, ವಿವೇಕ ಇಲ್ಲದ ಗೂಂಡಾ, ಶೋಕಿಲಾಲ ಸಂಸದ ಎಂದು ಕಿಡಿಕಾರಿದರು.
ಸಂಸದ ವಿ.ಶ್ರೀನಿವಾಸಪ್ರಸಾದ್, ಪ್ರತಾಪ್ ಸಿಂಹ ಅವರು ಕಾರ್ಪೋರೇಟ್ ಕಂಪೆನಿಗಳ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಜಿಲ್ಲೆಯ ಜನರ ಸಂಸ್ಕಾರವನ್ನು ಪ್ರತಿನಿಧಿಸಬೇಕಾದ ಸಂಸದ ಪ್ರತಾಪ್ ಸಿಂಹ ಪುರೋಹಿತಶಾಹಿಗಳು, ವಾಣಿಜ್ಯ, ಕಾರ್ಪೋರೇಟ್ ಪರವಾಗಿ ಪ್ರತಿನಿಧಿಸುತ್ತಿದ್ದಾರೆ. ವಿವೇಕ ಇಲ್ಲದ ಅವಿವೇಕಿತರ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಮಕೃಷ್ಣ ಆಶ್ರಮದ ವಿಚಾರದಲ್ಲಿ ವಕಾಲತ್ತು ವಹಿಸುತ್ತಿದ್ದಾರೆ. ಅವರು ಜಿಲ್ಲೆಯ ಜನರನ್ನು ಪ್ರತಿನಿಧಿಸುತ್ತಿಲ್ಲ. ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು ಮುತ್ಸದ್ಧಿಯಂತೆ ಮಾತನಾಡುತ್ತಿಲ್ಲ. ಇತಿಹಾಸವನ್ನು ಸರಿಯಾಗಿ ತಿಳಿದುಕೊಂಡಂತೆ ಮಾತನಾಡದೆ ರಾಜಕಾರಣಿ ರೀತಿ ಮಾತನಾಡುತ್ತಿದ್ದಾರೆ. ಎನ್ಟಿಎಂ ಶಾಲೆಯ ವಿಚಾರದಲ್ಲಿ ಸುಮ್ಮನಿರಬೇಕು. ಇಲ್ಲದಿದ್ದರೆ ಜನರ ಮುಂದೆ ಅವಮಾನವಾಗುತ್ತೀರಿ ಎಂದು ಹೇಳಿದರು.
ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ಕನ್ನಡ ಶಾಲೆಯನ್ನು ಉಳಿಸಬೇಕು, ಸ್ಮಾರಕವನ್ನು ನಿರ್ಮಿಸಬೇಕು. ಆದರೆ, ಶಾಲೆ ಕೆಡವುದಕ್ಕೆ ವಿರೋಧವಿದೆ. ನಗರದ ನಾನಾ ಕಡೆಗಳಲ್ಲಿ ಕಟ್ಟಲು ಅವಕಾಶವಿದೆ. ಆದರೆ, ಸ್ಮಾರಕದ ಹೆಸರಿನಲ್ಲಿ ವಾಣಿಜ್ಯ ಕೇಂದ್ರವನ್ನಾಗಿ ಮಾಡಿಕೊಳ್ಳಲು ಮಾಡಿರುವ ಹುನ್ನಾರವಾಗಿದೆ ಎಂದರು.