ಖಜಾನೆಯಲ್ಲಿ ಹಣವಿದ್ದ ಮೇಲೆ ಸಾವಿರಾರು ಕೋಟಿ ರೂ. ಬಿಲ್ ಬಾಕಿ ಏಕೆ: ದಿನೇಶ್ ಗುಂಡೂರಾವ್ ಪ್ರಶ್ನೆ
ಬೆಂಗಳೂರು, ಜು. 12: `ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತೆ, ಅಭಿವೃದ್ಧಿ ಕಾರ್ಯಕ್ಕೆ ಕೊರೋನ ನೆಪವಾಗಿದೆ. ಪಿಡಬ್ಲ್ಯೂಡಿ ಮತ್ತು ಬಿಬಿಎಂಪಿಯಲ್ಲಿ ನಡೆದ ಕಾಮಗಾರಿಗಳ ಬಿಲ್ ಪಾವತಿಸಲು ಆರ್ಥಿಕ ಸಂಕಷ್ಟದ ಕಾರಣ ಹೇಳುತ್ತಿದೆ. ಆದರೆ ಬಿಜೆಪಿ ಸರಕಾರದ ಖಜಾನೆಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಹಣವಿದೆ ಎನ್ನುತ್ತಾರೆ. ಖಜಾನೆಯಲ್ಲಿ ಹಣವಿದ್ದ ಮೇಲೆ ಸಾವಿರಾರು ಕೋಟಿ ರೂ. ಬಿಲ್ ಬಾಕಿ ಏಕೆ?' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಸೋಮವಾರ ಟ್ವೀಟ್ ಮಾಡಿರುವ ಅವರು, `15 ಸಾವಿರ ಕೋಟಿ ರೂ.ಗಳಷ್ಟು ಬಿಬಿಎಂಪಿ, ಪಿಡಬ್ಲ್ಯೂಡಿ ಬಿಲ್ ಬಾಕಿ ಉಳಿದಿದ್ದು, ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಂಠಿತವಾಗಿವೆ ಎಂದು ಪತ್ರಿಕಾ ವರದಿಯನ್ನು ಉಲ್ಲೇಖಿಸಿದ್ದು, ಕೋವಿಡ್ ನೆಪದಲ್ಲಿ ಸರಕಾರ ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ ಎಂದು ದೂರಿದ್ದಾರೆ.
ಪ್ರತಿಭಟನೆ: `ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮಾಡಿದ ಜಾತಿ ಗಣತಿ ವರದಿ ಬಿಡುಗಡೆ ಆಗಬೇಕು. ಅನೇಕ ಸಣ್ಣ ಮತ್ತು ಅತೀ ಸಣ್ಣ ಹಿಂದುಳಿದ ವರ್ಗಗಳಿಗೆ ಸಮಪಾಲು ಸಿಗುತ್ತಿಲ್ಲ. ಈ ವೈಜ್ಞಾನಿಕ ವರದಿಯಿಂದ ನ್ಯಾಯ ದೊರಕಿಸಲು ಸಾಧ್ಯ.
ರಾಜ್ಯ ಸರ್ಕಾರ ವರದಿಯನ್ನ ಕೂಡಲೆ ವಿಧಾನಸಭೆಯಲ್ಲಿ ಮಂಡಿಸಬೇಕು' ಎಂದು ದಿನೇಶ್ ಗುಂಡೂರಾವ್, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಆಗ್ರಹಿಸಿದ್ದಾರೆ.
ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತೆ, ಅಭಿವೃದ್ಧಿ ಕಾರ್ಯಕ್ಕೆ ಕೊರೊನಾ ನೆಪವಾಗಿದೆ. PWD/BBMPಯಲ್ಲಿ ನಡೆದ ಕಾಮಗಾರಿಗಳ ಬಿಲ್ ಪಾವತಿಸಲು ಆರ್ಥಿಕ ಸಂಕಷ್ಟದ ಕಾರಣ ಹೇಳುತ್ತಿದೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 12, 2021
ಆದರೆ @BJP4Karnataka ಖಜಾನೆಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಹಣವಿದೆ ಎನ್ನುತ್ತಾರೆ.
ಖಜಾನೆಯಲ್ಲಿ ಹಣವಿದ್ದ ಮೇಲೆ ಸಾವಿರಾರು ಕೋಟಿ ಬಿಲ್ ಬಾಕಿ ಯಾಕೆ? pic.twitter.com/NuQStGEq3w