ಬೆಲೆ ಏರಿಕೆ ವಿರುದ್ಧ ಯುವ ಕಾಂಗ್ರೆಸ್ ಸೈಕಲ್ ಜಾಥ: ಶ್ರೀನಿವಾಸ್ ಬಿ.ವಿ, ರಕ್ಷಾ ರಾಮಯ್ಯ ಸೇರಿ ಹಲವರ ಬಂಧನ
ಬೆಂಗಳೂರು, ಜು.12: ಕೇಂದ್ರ ಬಿಜೆಪಿ ಸರಕಾರ ನಿರಂತರವಾಗಿ ಪೆಟ್ರೋಲ್, ಡೀಸೆಲ್, ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದನ್ನು ವಿರೋಧಿಸಿ ಸೈಕಲ್ ಜಾಥ ನಡೆಸಲು ಮುಂದಾದ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ., ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ, ಯುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಅನಿಲ್ ಕುಮಾರ್ ಯಾದವ್, ಸುರಭಿ ದ್ವಿವೇದಿ ಮತ್ತಿತರರನ್ನು ಪೊಲೀಸರು ಬಂಧಿಸಿದರು.
ಈ ಸಂದರ್ಭದಲ್ಲಿ ಪೊಲೀಸರ ಕಾರ್ಯವೈಖರಿ ವಿರುದ್ಧ ಕಿಡಿಗಾರಿದ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್, ಬಾಪ್ಟಿಸ್ ಆಸ್ಪತ್ರೆಯಿಂದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದವರೆಗೆ ಸೈಕಲ್ ಜಾಥಗೆ ಪೊಲೀಸರು ಅನುಮತಿ ನೀಡಿದ್ದು, ಇದೀಗ ಜಾಥ ನಡೆಸಲು ಅವಕಾಶ ಕೊಡುವುದಿಲ್ಲ ಎಂದರೆ ಹೇಗೆ? ನಾವು ಸಾಂಕೇತಿಕವಾಗಿ ಸೈಕಲ್ ಜಾಥ ನಡೆಸುತ್ತೇವೆ. ನಮಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಸೈಕಲ್ ಜಾಥದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ನೂರಾರು ಸೈಕಲ್ ಸವಾರರನ್ನು ಪೊಲೀಸರು ದಾರಿ ಮಧ್ಯದಲ್ಲೇ ತಡೆದಿದ್ದರು. ನಂತರ ಪೊಲೀಸರು ಜಾಥ ನಡೆಸಲು ಮುಂದಾದ ಯುವ ಮುಖಂಡರ ಸೈಕಲ್ ಕಸಿದುಕೊಂಡು ಬಂಧಿಸಿದರು. ಆಗ ಪೊಲೀಸರ ವರ್ತನೆ ಬಗ್ಗೆ ಕೆಲ ಕಾಲ ವಾಗ್ವಾದ ನಡೆಯಿತು. ಸರಕಾರದ ಅಣತಿಯಂತೆ ಕೆಲಸ ಮಾಡಬೇಡಿ. ನಿಮ್ಮ ವಿವೇಚನೆಯಿಂದ ಕಾರ್ಯನಿರ್ವಹಣೆ ಮಾಡಿ ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಕ್ಷಾ ರಾಮಯ್ಯ ಹೇಳಿದರು.
ಪೊಲೀಸರು ನೀಡಿರುವ ಅನುಮತಿ ಪತ್ರವನ್ನು ಪ್ರದರ್ಶಿಸಿದ ರಕ್ಷಾ ರಾಮಯ್ಯ, ಪ್ರಜಾಪ್ರಭುತ್ವ ವಿರೋಧಿ ಧೋರಣೆ ತೋರುವುದು ಸರಿಯಲ್ಲ. ನಾವು ಜನರ ಪರವಾಗಿ ಸೈಕಲ್ ಜಾಥ ಹಮ್ಮಿಕೊಂಡಿದ್ದು, ಪ್ರತಿಭಟನೆ ಮಾಡುವ ನಮ್ಮ ಹಕ್ಕು ಕಸಿಯಬೇಡಿ ಎಂದು ಮನವಿ ಮಾಡಿದರು. ಆಗ ಪೊಲೀಸರು ನಿಮಗೆ ನೀಡಿದ್ದ ಅನುಮತಿಯನ್ನು ಇಂದು ಬೆಳಿಗ್ಗೆ ರದ್ದುಪಡಿಸಿದ್ದೇವೆ. ಜಾಥ ಮಾಡಬಾರದು. ಟ್ರಾಫಿಕ್ ಜಾಮ್ ಆಗುತ್ತಿದೆ ಎಂದರು.
ಆಗ ಕಾಂಗ್ರೆಸ್ ಮುಖಂಡರು ನಾವು ಸರ್ವೀಸ್ ರಸ್ತೆಯಲ್ಲಿ ಜಾಥ ಮಾಡುತ್ತಿದ್ದು, ಯಾರಿಗೂ ತೊಂದರೆ ಮಾಡುತ್ತಿಲ್ಲ. ಬೆಲೆ ಏರಿಕೆಯಿಂದ ಸಾಮಾನ್ಯ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಾಂಕೇತಿಕವಾಗಿ ಜಾಥದಲ್ಲಿ ಮುನ್ನಡೆಯಲು ಅವಕಾಶ ನೀಡಿ ಎಂಬ ಮನವಿಗೆ ಪೊಲೀಸರು ಕಿವಿಗೊಡಲಿಲ್ಲ.
ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಶ್ರೀನಿವಾಸ್ ಬಿ.ವಿ., ಕೇಂದ್ರ ಸರಕಾರದ ನೀತಿಗಳಿಂದಾಗಿ ಸಣ್ಣ ಸೂಜಿಯಿಂದ ಹಿಡಿದು ಪ್ರತಿಯೊಂದು ಬೆಲೆಯೂ ಹೆಚ್ಚಳವಾಗಿದೆ. ಜನ ಬದುಕಲು ಸಾಧ್ಯವಾಗದಂತಹ ವಾತಾವರಣವನ್ನು ಸರಕಾರ ನಿರ್ಮಿಸಿದೆ. ಒಂದೂವರೆ ವರ್ಷದಿಂದ ಕೊರೋನ ಸಂಕಷ್ಟದಿಂದ ಜನ ತತ್ತರಿಸುತ್ತಿದ್ದರೂ ಸಾಮಾನ್ಯ ಜನರ ಜೀವನ ರಕ್ಷಿಸುವ ಕೆಲಸವನ್ನು ಸರಕಾರ ಮಾಡಿಲ್ಲ. ಇಂತಹ ಜನ ವಿರೋಧಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೂಡಲೇ ರಾಜೀನಾಮೆ ನೀಡಿ ನಿರ್ಗಮಿಸಬೇಕು ಎಂದು ಒತ್ತಾಯಿಸಿದರು.
ಬಂಧಿತ ಮುಖಂಡರನ್ನು ನಂತರ ಆಡುಗೋಡಿ ಸಿ.ಆರ್. ಪೊಲೀಸ್ ಠಾಣೆಗೆ ಕರೆದೊಯ್ದು ಪೊಲಿಸರು ಪ್ರಕರಣ ದಾಖಲಿಸಿ ಬಿಡುಗಡೆ ಮಾಡಿದರು.
Arrest Us - File Cases - We aren't kneeling down.
— Srinivas B V (@srinivasiyc) July 12, 2021
In Bengaluru today taking part in the protest organized by @IYCKarnataka President @RakshaRamaiah & youth congress workers against rising fuel prices. pic.twitter.com/JvWsnFd764