ಉತ್ತರ ಕರ್ನಾಟಕದವರು ಮುಖ್ಯಮಂತ್ರಿ ಆಗಲೇಬೇಕು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಧಾರವಾಡ, ಜು. 12: `ಉತ್ತರ ಕರ್ನಾಟಕದವರು ಮುಖ್ಯಮಂತ್ರಿ ಆಗಬೇಕು ಎಂಬುದು ನಿಜ. ಸಚಿವ ಉಮೇಶ ಕತ್ತಿ ಮುಂದಿನ ಸಿಎಂ ಎಂದು ಹೇಳಿದ್ದಾರೆ. ಆದರೆ, ಅವರು ನಾಳೆಯೇ ಆಗುತ್ತಾರೆಂದು ಅವರು ಹೇಳಿಲ್ಲವಲ್ಲ. ಅಲ್ಲದೆ, ಉಮೇಶ ಕತ್ತಿ ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೆ ಗೊತ್ತಿಲ್ಲ' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಆಹಾರ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, `ಉತ್ತರ ಕರ್ನಾಟಕಕ್ಕೆ ಸಿಎಂ ಸ್ಥಾನದ ಅವಕಾಶ ಬರಬೇಕಿದೆ. ಆದರೆ ನಾಳೆ, ನಾಡಿದ್ದು, ಈ ವರ್ಷದಲ್ಲಿ ಎಂದೇನು ಅಲ್ಲ. ಆದರೆ ಮುಂದೆ ಉತ್ತರ ಕರ್ನಾಟಕಕ್ಕೆ ಅವಕಾಶ ಬರಬೇಕಿದೆ, ಖಂಡಿತವಾಗಿಯೂ ಉತ್ತರ ಕರ್ನಾಟಕದವರು ಸಿಎಂ ಆಗಬೇಕು. ಆದರೆ ಇದೇ ಅವಧಿಯಲ್ಲಿ ಎಂದು ಅರ್ಥವಲ್ಲ' ಎಂದು ವಿವರಣೆ ನೀಡಿದರು.
ಭ್ರಷ್ಟಾಚಾರದ ರಕ್ತ ಬೀಜಾಸುರರು: `ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳು. ಅವರು ಒಂದು ರೀತಿಯಲ್ಲಿ ಭ್ರಷ್ಟಾಚಾರದ ರಕ್ತ ಬೀಜಾಸುರರು. ಹೀಗಿರುವಾಗ ಸಿದ್ದರಾಮಯ್ಯನವರು ಭ್ರಷ್ಟಾಚಾರದ ಆರೋಪ ಮಾಡುವುದರಲ್ಲಿ ಅರ್ಥವಿದೆಯೇ? ಏಳು ವರ್ಷದಿಂದ ದೇಶದಲ್ಲಿ ನಾವು ಸರಕಾರ ನಡೆಸುತ್ತಿದ್ದೇವೆ, ಒಂದೂ ಆರೋಪ, ಒಬ್ಬ ಮಂತ್ರಿ ಮೇಲೆಯೂ ಆಗಿಲ್ಲ ಎಂದು ಜೋಶಿ ಸ್ಪಷ್ಟಣೆ ನೀಡಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೆಸರಿನಲ್ಲಿ ಭ್ರಷ್ಟತೆ, ವರ್ಗಾವಣೆಯಲ್ಲಿಯೂ ಭ್ರಷ್ಟಾಚಾರದ ಆರೋಪವನ್ನು ಕಾಂಗ್ರೆಸ್ನವರು ಮಾಡಿದ್ದಾರೆ. ಆದರೆ, ಈ ಬಗ್ಗೆ ತನಿಖೆ ಆಗಬೇಕು ಎನ್ನುತ್ತಿದ್ದಾರೆ. ಅವರು ಅದಕ್ಕೆ ಸೂಕ್ತ ದಾಖಲೆಗಳನ್ನು ಕೊಡಲಿ, ಸರಕಾರ ತನಿಖೆ ಮಾಡುತ್ತದೆ. ತಪ್ಪಿತಸ್ಥರಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದೆ ಎಂದು ಪ್ರಹ್ಲಾದ್ ಜೋಶಿ ಇದೇ ವೇಳೆ ತಿಳಿಸಿದರು.