ಎಸೆಸೆಲ್ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಕಡಿಮೆ ಅಂಕ: ವಿದ್ಯಾರ್ಥಿನಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
ಚಾಮರಾಜನಗರ, ಜು.15: ಎಸೆಸೆಲ್ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಹಿನ್ನಲೆಯಲ್ಲಿ ಟಾಪರ್ ವಿದ್ಯಾರ್ಥಿನಿಯೊಬ್ಬಳು ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಸಾಯಿಬಾಬಾ ಬಡಾವಣೆಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಸಾಯಿಬಾಬಾ ಬಡಾವಣೆ ನಿವಾಸಿಯಾಗಿರುವ ಹನೂರು ಕಾಲೇಜಿನ ಕ್ರಿಸ್ತರಾಜ ಶಾಲೆಯ ಶಿಕ್ಷಕ ಸಂತೋಷ್ ಎಂಬುವವರ ಪುತ್ರಿ ಸಮನ್ವಿತ ಮೃತ ಬಾಲಕಿ. ಸಮನ್ವಿತ ಓದಿನಲ್ಲಿ ಸದಾ ಮುಂದಿದ್ದು ಪ್ರತೀ ಪರೀಕ್ಷೆಯಲ್ಲಿ ಶಾಲೆಯ ಟಾಪರ್ ಕೂಡ ಆಗಿದ್ದಳಂತೆ. ಇತ್ತೀಚೆಗೆ ನಡೆಸಲಾಗಿದ್ದ ಪೂರ್ವಭಾವಿ ಪರೀಕ್ಷೆಯಲ್ಲಿ ಸಮನ್ವಿತಾಳಿಗೆ ನಿರೀಕ್ಷಿತ ಅಂಕ ಬಾರದಿರುವುದು ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ವಿಷಯ ತಿಳಿದು ನಿಸರ್ಗ ವಿದ್ಯಾರ್ಥಿನಿಕೇತನ ಶಾಲೆ ಆಡಳಿತ ವರ್ಗ, ಮೃತ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಪಾಲಕರಿಗೆ ಸಾಂತ್ವನ ಹೇಳಿದ್ದಾರೆ.
ಅಲ್ಲದೆ ಆನ್ ಲೈನ್ ತರಗತಿಯ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಈ ಬಗ್ಗೆ ಧೈರ್ಯತುಂಬುವ ಮಾತುಗಳನ್ನಾಡಿದ್ದು , ಮಕ್ಕಳು ಯಾವುದೆ ಕಾರಣಕ್ಕೂ ಕಡಿಮೆ ಅಂಕ ಬಂತು ಎಂದು ವಿಚಲಿತರಾಗಬೇಡಿ ಭವಿಷ್ಯ ಇರುವ ಮಕ್ಕಳು ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಎಂದು ತರಗತಿಯಲ್ಲಿ ಮಕ್ಕಳಿಗೆ ಆತ್ಮಸ್ತೈರ್ಯ ತುಂಬಲು ಇದೇ ವೇಳೆ ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.