ಆಡಿಯೋದಲ್ಲಿರುವುದು ನಳಿನ್ ಕುಮಾರ್ ಧ್ವನಿ ಎಂದು ಈಶ್ವರಪ್ಪರಿಗೆ ತಿಳಿದಿದೆ: ಬೇಳೂರು ಗೋಪಾಲಕೃಷ್ಣ ಹೇಳಿಕೆ
"ಕಟೀಲ್ ರ ನಗುವನ್ನು ಮಿಮಿಕ್ರಿ ಮಾಡಲು ಸಾಧ್ಯವಿಲ್ಲ"
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರದ್ದು ಎನ್ನಲಾದ ಆಡಿಯೋವೊಂದರ ಕುರಿತಾದಂತೆ ಮಾತನಾಡಿದ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ, "ಅದು ನಳಿನ್ ಕುಮಾರ್ ಕಟೀಲ್ ರದ್ದೇ ಧ್ವನಿ ಎಂದು ಈಶ್ವರಪ್ಪರಿಗೆ ತಿಳಿದಿದೆ. ಮಲೆನಾಡು ಜಿಲ್ಲೆಯ ಅಭಿವೃದ್ಧಿಗಾಗಿ ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಬೇಕು ಎಂದು ಅವರು ಹೇಳಿಕೆ ನೀಡಿದ್ದಾರೆ.
"ಮಲೆನಾಡು ಜಿಲ್ಲೆಯ ಅಭಿವೃದ್ಧಿಗಾಗಿ ಯಡಿಯೂರಪ್ಪ ಮುಂದುವರೆಯಬೇಕು. ಆದರೆ, ರಾಜ್ಯದ ಜನರ ಸಮಸ್ಯೆ ಆಲಿಸುವ ಬದಲು ಬಿಜೆಪಿ ಸರ್ಕಾರ ತಮ್ಮದೇ ಆದ ಸಮಸ್ಯೆಯಲ್ಲಿದೆ. ಬರೀ ನಿಮ್ಮದೇ ಕಷ್ಟ ಹೇಳಿಕೊಳ್ಳುತ್ತಾ ಕೂರಬೇಡಿ. ಜನರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. ಅದು ಬಿಟ್ಟು ತಮ್ಮದೇ ಸಮಸ್ಯೆ ಹೇಳುತ್ತಿದ್ದಾರೆ. ಜನರು ಇವರ ಕಷ್ಟ ಕೇಳಲು ರೆಡಿ ಇಲ್ಲ" ಎಂದು ಅವರು ಹೇಳಿದರು.
ನಳಿನ್ ಕುಮಾರ್ ಕಟೀಲು ಅವರದ್ದೆನ್ನಲಾದ ಆಡಿಯೋ ಕುರಿತು ಮಾತನಾಡಿದ ಅವರು, "ಕಟೀಲು ಧ್ವನಿ ಕೇಳಿಸಿಕೊಂಡರೆ, ರಾಜಿನಾಮೆ ನೀಡುವುದು ಪಕ್ಕಾ ಅನಿಸುತ್ತದೆ. ಅದು ಕಟೀಲು ಅವರ ಧ್ವನಿಯೇ ಆಗಿದೆ. ಅವರ ನಗು ಅನುಕರಣೆ ಮಾಡಲು ಆಗೊಲ್ಲಾ ಅವರ ನಗುನ ಮಿಮಿಕ್ರಿ ಮಾಡಲು ಸಾಧ್ಯವಿಲ್ಲ. ಅದು ಅವರ ಧ್ವನಿ ಎಂದು ಈಶ್ವರಪ್ಪರಿಗೆ ತಿಳಿದಿದೆ. ಅದಕ್ಕೇ ಈಶ್ವರಪ್ಪ, ನಾನೇನು ಗೂಟ ಹೊಡೆದುಕೊಂಡು ಕೂರಲು ಬಂದಿಲ್ಲ ಎಂದು ಹೇಳಿಕೆ ನೀಡಿದ್ದಾರೆ" ಎಂದು ಹೇಳಿದರು.