ಐಟಿಐ ಪಾಸಾದವರಿಗೆ ಆಕ್ಸಿಜನ್ ಘಟಕಗಳ ನಿರ್ವಹಣೆ: ಡಿಸಿಎಂ ಅಶ್ವತ್ಥನಾರಾಯಣ
‘ಆಕ್ಸಿಜನ್ ಘಟಕ ನಿರ್ವಹಣೆ, ಕಾರ್ಯಾಚರಣೆ ಬಗ್ಗೆ ತರಬೇತಿ’
ಬೆಂಗಳೂರು, ಜು.22: ಜಿಲ್ಲಾ, ತಾಲೂಕು ಆಸ್ಪತ್ರೆಗಳು ಸೇರಿದಂತೆ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಆಮ್ಲಜನಕ ಉತ್ಪಾದಕ ಘಟಕಗಳನ್ನು ಸ್ಥಾಪಿಸಲಾಗುತ್ತಿದ್ದು, ಅವುಗಳ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಐಟಿಐ ವಿದ್ಯಾರ್ಥಿಗಳನ್ನೆ ನೇಮಕ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಗುರುವಾರ ವಿಕಾಸಸೌಧದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಐಟಿಐನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆಕ್ಸಿಜನ್ ಘಟಕಗಳ ನಿರ್ವಹಣೆ-ಕಾರ್ಯಾಚರಣೆ ಕುರಿತ ಆನ್ಲೈನ್ ತರಬೇತಿಗೆ ವರ್ಚುಯಲ್ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಈಗಾಗಲೇ ರಾಜ್ಯದ ಪ್ರತಿಯೊಂದು ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕಗಳನ್ನು ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ. ಇದುವರೆಗೆ 350 ಘಟಕಗಳನ್ನು ಅಳವಡಿಸಲಾಗಿದೆ. ಇವುಗಳ ನಿರ್ವಹಣೆಯ ಹೊಣೆಯನ್ನು ಐಟಿಐ ವಿದ್ಯಾರ್ಥಿಗಳಿಗೆ ವಹಿಸುವುದು ಉತ್ತಮ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಹಳೆಯ ಸ್ಥಿತಿಯಲ್ಲಿರುವ 150 ಐಟಿಐಗಳನ್ನು ಉನ್ನತೀಕರಣ ಮಾಡಲು ಟಾಟಾ ಟೆಕ್ನಾಲಜೀಸ್ ಜತೆ ಸರಕಾರ ಒಡಂಬಡಿಕೆ ಮಾಡಿಕೊಂಡಿದೆ. ಹೀಗಾಗಿ ಇನ್ನು ಮುಂದೆ ಐಟಿಐ ವಿದ್ಯಾರ್ಥಿಗಳು ಆಕ್ಸಿಜನ್ ಘಟಕಗಳನ್ನು ನಿರ್ವಹಿಸುವುದು ಮಾತ್ರವಲ್ಲ, ಆಕ್ಸಿಜನ್ ತಯಾರಿಕಾ ಯಂತ್ರಗಳನ್ನು ತಯಾರಿಸುವ ಕುಶಲತೆಯನ್ನು ಬೆಳೆಸಿಕೊಳ್ಳಬೇಕು ಎಂದು ಅಶ್ವತ್ಥ ನಾರಾಯಣ ಸಲಹೆ ಮಾಡಿದರು.
ಕೇಂದ್ರ ಸರಕಾರದ ತರಬೇತಿ ಮಹಾ ನಿರ್ದೇಶನಾಲಯ ಕೈಗೊಂಡಿರುವ ಈ ತರಬೇತಿ ಕಾರ್ಯಕ್ರಮ ಅತ್ಯುತ್ತಮ ಕ್ರಮವಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.