`ನಾನೇ ಮುಖ್ಯಮಂತ್ರಿ' ಎಂದರೆ ಬಿಜೆಪಿಯಲ್ಲಿ ಆಗುವುದಿಲ್ಲ: ಸಚಿವ ಆರ್.ಅಶೋಕ್
ಬೆಂಗಳೂರು, ಜು. 23: `ನಾನು ಎಂದು ಹೇಳುವವರು ಯಾರೂ ಮುಖ್ಯಮಂತ್ರಿ ಆಗುವುದಿಲ್ಲ. ನಮ್ಮ ಪಕ್ಷದಲ್ಲಿ ಆ ವ್ಯವಸ್ಥೆ ಇಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡಲಿದೆ' ಎಂದು ಕಂದಾಯ ಸಚಿವ ಆರ್. ಅಶೋಕ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ಮುಖ್ಯಮಂತ್ರಿ ರೇಸ್ನಲ್ಲಿ ನಾನು ಇದ್ದೇನೆ ಎಂದು ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ. ಅದರಿಂದ ಉಪಯೋಗವೂ ಆಗುವುದಿಲ್ಲ. ಎಲ್ಲವನ್ನು ಹೈಕಮಾಂಡ್ ನಿರ್ಧರಿಸಲಿದೆ. ಪಕ್ಷದ ವರಿಷ್ಟರು ಎಲ್ಲರನ್ನು ಗಮನಿಸುತ್ತಿದ್ದು ಸೂಕ್ತ ಸಂದರ್ಭದಲ್ಲಿ ತೀರ್ಮಾನ ಮಾಡಲಿದ್ದಾರೆ' ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಜು.25ಕ್ಕೆ ವರಿಷ್ಟರಿಂದ ಸಂದೇಶ ಬರಲಿದೆ ಎಂದು ಈಗಾಗಲೇ ಮುಖ್ಯಮಂತ್ರಿಯವರು ಹೇಳಿದ್ದು, ಅಲ್ಲಿಯವರೆಗೂ ಕಾದುನೋಡಬೇಕು. ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿ ಆಗಿಲ್ಲ. ಈಗಲೇ ಟವಲ್ ಹಾಕುವುದು ಬೇಡ ಎಂದ ಸಚಿವ ಅಶೋಕ್, ವಲಸಿಗರು ಯಾರೂ ಪ್ರತ್ಯೇಕ ಸಭೆ ನಡೆಸಿಲ್ಲ. ಅವರಿಗೆ ಯಾವುದೇ ಆತಂಕವೂ ಇಲ್ಲ. ಮುಖ್ಯಮಂತ್ರಿ ಕೊಠಡಿಯಲ್ಲಿ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿದ್ದಾರೆ. ಅವರನ್ನು ಪಕ್ಷ ಚೆನ್ನಾಗಿ ನೋಡಿಕೊಳ್ಳಲಿದೆ ಎಂದರು.