ಕಲಬುರಗಿ: ಕಾಲು ಬೆರಳಿನಿಂದಲೇ ಎಸೆಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ
ಕಲಬುರಗಿ: ತನ್ನೆರಡು ಕೈಗಳಿಲ್ಲದಿದ್ದರೂ ಕಾಲಿನ ಹೆಬ್ಬರಳಿನ ಸಹಾಯದಿಂದಲೇ ಎಸೆಸೆಲ್ಸಿ ಪರೀಕ್ಷೆ ಬರೆಯುವ ಮೂಲಕ ವಿದ್ಯಾರ್ಥಿಯೋರ್ವನು ಇತರರಿಗೆ ಹುಬ್ಬೇರಿಸುವಂತೆ ಮಾಡಿದ ಘಟನೆ ಆಳಂದ ತಾಲೂಕಿನ ಸಾವಳೇಶ್ವರ ಗ್ರಾಮದ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.
ತಾಲೂಕಿನ ಸಾವಳೇಶ್ವರ ಗ್ರಾಮದ ವಿಶ್ವಸನ್ಮತಿ ಪ್ರೌಢಶಾಲೆಯ 10ನೇ ತರಗತಿಯ ಲಕ್ಷ್ಮೀಪುತ್ರ ಅಮೃತ ಮಾಡ್ಯಾಳೆ ಎಂಬುವ ವಿದ್ಯಾರ್ಥಿಯೇ ಗ್ರಾಮದ ಮೂರಾರ್ಜಿ ದೇಸಾಯಿ ವಸತಿ ಶಾಲೆಯ 10ನೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಎದುರಿಸಿದ್ದು, ಈತನ್ನು ಶಿಕಕ್ಷಣ ಕಲಿತು ಸಾಧನೆ ಮಾಡಬೇಕು ಎಂಬ ಹಂಬಲಹೊಂದಿರುವ ಈ ವಿದ್ಯಾರ್ಥಿ ತನ್ನ ಕಾಲಿನ ಹೆಬ್ಬರಳಿನಿಂದಲೇ ಯಾರ ಸಹಾಯವೂ ಇಲ್ಲದೆ ಪರೀಕ್ಷೆ ಬರೆದು ಗಮನ ಸೆಳೆದನು.
ಎರಡು ಕೈಗಳಿಲ್ಲದೆ ಜೀವನದಲ್ಲಿ ಎಂದಿಗೂ ಜಿಗುಪ್ಸೆ ಹೊಂದದ ಲಕ್ಷ್ಮೀಪುತ್ರ ಕಾಲಿನ ಬೆರಳಿನ ಸಹಾಯದಿಂದಲೇ ಊಟ ಮಾಡುವ ಈತ ಓದು ಬರಹ ಕಲಿತು ಪರೀಕ್ಷೆಗೆ ಹಾಜರಾಗಿದ್ದಾನೆ. ಇವನ ಛಲವೇ ನಮಗೆ ಹುಮ್ಮಸು ತರಿಸುತ್ತಿದೆ ಎಂದು ಪಾಲಕರು ಹೇಳುತ್ತಾರೆ.
ಈ ಬಾರಿಯ 10ನೇ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಇರುವುದರಿಂದ ಪತ್ರಿಕೆಯ ಓಎಂಆರ್ ಶೀಟ್ ಸಹ ಕಾಲಿನ ಬೆರಳುಗಳಿಂದಲೇ ಪೆನ್ನು ಹಿಡಿದು ಗುರುತು ಹಾಕಿ ಬರೆಯಲು ಈ ವಿದ್ಯಾರ್ಥಿಗೆ ಮತ್ತುಷ್ಟು ಅನುಕೂಲವಾಯಿತು.
ಪರೀಕ್ಷಾ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ ಅವರು ವಿದ್ಯಾರ್ಥಿಯ ಛಲಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿ ಮಾಹಿತಿ ನೀಡಿದ್ದಾರೆ. ಪರೀಕ್ಷಾ ಕೇಂದ್ರದ ಅಧೀಕ್ಷಕಿ ಮಧುಮತಿ ಇಕ್ಕಳಕಿ ಹಾಜರಿದ್ದರು.