ಮುಖ್ಯಮಂತ್ರಿಯ ಜವಾಬ್ದಾರಿ ನೀಡಿದರೆ ನಿಭಾಯಿಸುತ್ತೇನೆ: ಮುರುಗೇಶ್ ನಿರಾಣಿ
ಬೆಂಗಳೂರು, ಜು.27: ವೈಯಕ್ತಿಕ ಕೆಲಸದಿಂದಾಗಿ ನಿನ್ನೆ ಹೊಸದಿಲ್ಲಿಗೆ ಹೋಗಿದ್ದೆ. ಪಕ್ಷದ ರಾಷ್ಟ್ರೀಯ ನಾಯಕರನ್ನು ನಾನು ಭೇಟಿಯಾಗಿಲ್ಲ. ಯಾರನ್ನು ಮುಖ್ಯಮಂತ್ರಿ ಮಾಡಬೇಕು ಅನ್ನೋದನ್ನು ವರಿಷ್ಠರು ಹಾಗೂ ಸಂಘ ಪರಿವಾರದ ಪ್ರಮುಖರು ನಿರ್ಧರಿಸುತ್ತಾರೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ಮುಖ್ಯಮಂತ್ರಿಯ ಜವಾಬ್ದಾರಿ ನೀಡಿದರೆ ನಿಭಾಯಿಸುತ್ತೇನೆ. ಕೇವಲ ನಾನು ಅಷ್ಟೇ ಅಲ್ಲ ನಮ್ಮ ಪಕ್ಷದ 120 ಶಾಸಕರಿಗೂ ಆ ಸಾಮರ್ಥ್ಯ ಇದೆ ಎಂದರು.
ಪಂಚಮಸಾಲಿ ಲಿಂಗಾಯತರಿಗೆ ಮುಖ್ಯಮಂತ್ರಿ ಹುದ್ದೆ ಕೊಡಬೇಕೆಂದು ಮಠಾಧೀಶರು ಸೇರಿದಂತೆ ಇನ್ನಿತರರು ಒತ್ತಾಯ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರಿಗೆ ಅಧಿಕಾರ ಕೊಡಬೇಕೆಂದು ನಿರ್ಧರಿಸಲು ನಮ್ಮ ಪಕ್ಷದ ನಾಯಕರು ಸಮರ್ಥರಿದ್ದಾರೆ. ರಾಜ್ಯ ಹಾಗೂ ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಪಕ್ಷದ ನಿಯಮದಂತೆ 75 ವರ್ಷದ ನಂತರ ಯಾರೂ ಕೂಡ ಅಧಿಕಾರ ಸ್ಥಾನದಲ್ಲಿ ಮುಂದುವರಿಯುವಂತಿಲ್ಲ. ಆದರೂ, ಯಡಿಯೂರಪ್ಪ ಅವರಿಗೆ ಎರಡು ವರ್ಷ ಹೆಚ್ಚು ಸಮಯ ಕೊಟ್ಟಿದ್ದಾರೆ. ಈ ವಿಷಯವನ್ನು ಸ್ವತಃ ಮುಖ್ಯಮಂತ್ರಿಯೇ ನಿನ್ನೆಯ ಭಾಷಣದಲ್ಲಿ ಹೇಳಿದ್ದಾರೆ ಎಂದು ಮುರುಗೇಶ್ ನಿರಾಣಿ ತಿಳಿಸಿದರು.