ರಾಜ್ಯದಲ್ಲಿ ಜೆಡಿಎಸ್ ಇನ್ನೂ ಪ್ರಬಲವಾಗಿದೆ: ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಪುತ್ರಿ ಟ್ವೀಟ್
ಬೆಂಗಳೂರು, ಜು.29: ಮಾಜಿ ಕೇಂದ್ರ ಸಚಿವ ಅನಂತ್ಕುಮಾರ್ ಅವರ ಪುತ್ರಿ ವಿಜೇತಾ ಅನಂತ್ಕುಮಾರ್ ಅವರು ಜೆಡಿಎಸ್ ಇನ್ನು ಬಲಿಷ್ಠ ರಾಜಕೀಯ ಪಕ್ಷವಾಗಿ ಉಳಿದಿದೆ ಎಂದು ಟ್ವೀಟ್ ಮಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿ ವೈರಲ್ ಆಗಿದೆ.
ಕೇವಲ ಸೀಟುಗಳಿಂದ ಜೆಡಿಎಸ್ ಪಕ್ಷದ ಜನಪ್ರಿಯತೆ ಲೆಕ್ಕ ಹಾಕಲು ಆಗಲ್ಲ. ಸೀಟ್ ಏನಿದ್ದರು ಕೊನೆಗೆ ಮಾತ್ರ ಎಂದು ನೆಟ್ಟಿಗರೊಬ್ಬರ ಕಮೆಂಟ್ಗೆ ವಿಜೇತಾ ಅವರು ಪ್ರತಿಕ್ರಿಯೆ ನೀಡಿರುವುದು ಹಲವು ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಜೆಡಿಎಸ್ ಕುರಿತು ಅವರು ಮಾಡಿರುವ ಟ್ವೀಟ್ ಉದ್ದೇಶ ಏನು ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಮಾಜಿ ಸಚಿವ ಅನಂತ್ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ಕುಮಾರ್ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಆಕಾಂಕ್ಷಿ ಆಗಿದ್ದರು. ಆದರೆ, ತೇಜಸ್ವಿನಿ ಅವರಿಗೆ ಟಿಕೆಟ್ ನೀಡದೇ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿದ್ದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಅವರು ಇತ್ತೀಚಿನ ದಿನಗಳಲ್ಲಿ ತಟಸ್ಥವಾಗಿ ಉಳಿದಿದ್ದಾರೆ. ರಾಜಕೀಯದಲ್ಲೂ ಸಕ್ರಿಯವಾಗಿಲ್ಲ. ಈ ಹಿನ್ನೆಲೆಯಲ್ಲಿ ವಿಜೇತ ಅನಂತ್ಕುಮಾರ್ ಟ್ವೀಟ್ ಕುತೂಹಲ ಕೆರಳಿಸಿದೆ.
ಇನ್ನು ಈ ಟ್ವೀಟ್ ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಜೆಡಿಎಸ್ ಪಕ್ಷ ಕೇವಲ ಮೈಸೂರು ಮತ್ತು ಮಂಡ್ಯ ಜಿಲ್ಲೆಗೆ ಸೀಮಿತವಾಗಿದೆ. ಉತ್ತರ ಕರ್ನಾಟಕದಲ್ಲಿ ಅದಕ್ಕೆ ಯಾವುದೇ ನಲೆ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
Why Karnataka politics is really interesting?
— Vijeta AnanthKumar (@vijeta_at) July 29, 2021
JDS is still a very strong political force