ದಿಲ್ಲಿ.. ದಿಲ್ಲಿ..ಎನ್ನುತ್ತಿದ್ದ ಬಿಜೆಪಿಗರು ಖಾತೆ ಆಸೆಗಾಗಿ ಇಲ್ಲಿ.. ಇಲ್ಲಿ..ಎನ್ನುತ್ತಿದ್ದಾರೆ: ಕಾಂಗ್ರೆಸ್ ಲೇವಡಿ
ಬೆಂಗಳೂರು, ಜು. 29: `ವಲಸಿಗ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ್ದಕ್ಕೆ ಜಗದೀಶ್ ಶೆಟ್ಟರ್ ಮುನಿಸಿಕೊಂಡಿದ್ದಾರೆ. ಹಿರಿಯ ಹಾಗೂ ಮಾಜಿ ಸಿಎಂ, ಬೊಮ್ಮಾಯಿ ಕೈಕೆಳಗೆ ಕೆಲಸ ಮಾಡಲಾರೆ ಎನ್ನುವುದು ಅವರ ಪ್ರತಿಷ್ಠೆ!
ಶೆಟ್ಟರೇ, ಮೀರ್ಸಾದಿಕ್ ನಳಿನ್ ಕುಮಾರ್ ಕಟೀಲ್ ದೂರ ಇಡುವ ಮೊದಲು ನೀವೇ ದೂರ ಸರಿದು ಮಾನ ಉಳಿಸಿಕೊಳ್ಳುವ ಚಿಂತನೆಯೇ!?' ಎಂದು ಕಾಂಗ್ರೆಸ್ ಖಾರವಾಗಿ ಪ್ರಶ್ನಿಸಿದೆ.
ಗುರುವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ಇಷ್ಟು ದಿನ ಯಾವುದೇ ಬಿಜೆಪಿ ನಾಯಕರನ್ನ ಎಲ್ಲಿದ್ದೀರಿ ಎಂದು ಕೇಳಿದರೆ
`ದಿಲ್ಲಿ ದಿಲ್ಲಿ ದಿಲ್ಲಿ...' ಎನ್ನುತ್ತಿದ್ದರು! ಈಗ ಖಾತೆ ಆಸೆಗಾಗಿ, ಸಿಎಂ ಮನೆ ಮುಂದೆ ನಿಂತು `ಇಲ್ಲಿ ಇಲ್ಲಿ ಇಲ್ಲಿ...' ಎನ್ನುತ್ತಿದ್ದಾರೆ!
ನೆರೆಯಿಂದ ನೊಂದ ರಾಜ್ಯದ ಸಂತ್ರಸ್ತ ಜನರು ಮಾತ್ರ ಸರಕಾರವನ್ನ `ಎಲ್ಲಿ ಎಲ್ಲಿ ಎಲ್ಲಿ...' ಎಂದು ಕೇಳುತ್ತಿದ್ದಾರೆ! ಎಂದು ಲೇವಡಿ ಮಾಡಿದೆ.
`ನಾಯಕತ್ವ ಬದಲಾವಣೆಯಿಂದ ಬಿಜೆಪಿ ವಿರುದ್ಧ ಬಿಜೆಪಿಯ ಆಂತರಿಕ ಕಿತ್ತಾಟ ಮತ್ತೊಂದು ಮಗ್ಗುಲಿಗೆ ಹೊರಳಲಿದೆ. ಜಗದೀಶ್ ಶೆಟ್ಟರ್ ಮುನಿಸಿಕೊಂಡಿದ್ದಾರೆ, ಈಶ್ವರಪ್ಪ ಸೆಟೆದು ಕುಳಿತಿದ್ದಾರೆ! ಸಂಪುಟ ರಚನೆ ಮುಗಿಯುವಷ್ಟರಲ್ಲಿ ಮತ್ತೊಂದಿಷ್ಟು ಬಂಡಾಯಗಾರರು ಸೃಷ್ಟಿಯಾಗುತ್ತಾರೆ, ಒಟ್ಟಿನಲ್ಲಿ ಬಿಜೆಪಿ ಪಕ್ಷದಿಂದ ಸ್ಥಿರ ಸರಕಾರ ಮರೀಚಿಕೆ ಅಷ್ಟೇ' ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
`ಕಳೆದ ಪ್ರವಾಹಗಳಿಂಗಿಂತ ಈ ಭಾರಿಯ ಪ್ರವಾಹ ಸಂತ್ರಸ್ತರಿಗೆ ಹೆಚ್ಚು ಭೀಕರ, ಲಾಕ್ಡೌನ್ನಿಂದ ಆದಾಯದ ಮೂಲವನ್ನ ಕಳೆದುಕೊಂಡ ಜನತೆಗೆ ನೆರೆ ದೊಡ್ಡ ಆಘಾತ ತಂದಿದೆ. ಸಂತ್ರಸ್ತರ ಕೈಯ್ಯಲ್ಲಿ ಹಣವಿಲ್ಲ, ತಕ್ಷಣದ ಪರಿಹಾರವಾಗಿ 10 ಸಾವಿರ ರೂ.ಗಳ ನೆರವು ನೀಡುವುದು ಅತ್ಯಗತ್ಯ. ಸಂಪುಟ ಸರ್ಕಸ್ಸಿನಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಗಮನಿಸುವರೇ?' ಎಂದು ಕಾಂಗ್ರೆಸ್ ಆಗ್ರಹಿಸಿದೆ.
`ಮಳೆ ಕಡಿಮೆಯಾದರೂ ನೆರೆ ಕಡಿಮೆಯಾಗದೆ ಜನ ತೀವ್ರ ಸಂಕಷ್ಟದಲ್ಲಿದ್ದಾರೆ, ಸಂತ್ರಸ್ತರತ್ತ ಒಬ್ಬನೇ ಒಬ್ಬ ಸರಕಾರದ ಪ್ರತಿನಿಧಿಯೂ ಹೋಗುತ್ತಿಲ್ಲ, ಈ ಹೊತ್ತಿನಲ್ಲಿ ಸಂತ್ರಸ್ತರು ಆರ್ಥಿಕ ನಿರೀಕ್ಷೆಯಲ್ಲಿದ್ದಾರೆ. ಆದರೆ, ಬಿಜೆಪಿಗರು ಮಂತ್ರಿಗಿರಿಯ ನಿರೀಕ್ಷೆಯಲ್ಲಿದ್ದಾರೆ, ಸಿಎಂ ಹೈಕಮಾಂಡ್ ಆದೇಶದ ನಿರೀಕ್ಷೆಯಲ್ಲಿದ್ದಾರೆ! ಜನರನ್ನ ಕೇಳುವವರಾರು?' ಎಂದು ಕಾಂಗ್ರೆಸ್ ಟ್ವಿಟ್ಟರ್ ಮೂಲಕ ಪ್ರಶ್ನೆ ಮಾಡಿದೆ.
`ರಾಜ್ಯದಲ್ಲಿ ಸುಮಾರು 1.70 ಲಕ್ಷದಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದ ವರದಿ ಅತೀ ಆತಂಕಕಾರಿ. ಇದು ಬಾಲಕಾರ್ಮಿಕರನ್ನ, ಬಾಲ್ಯ ವಿವಾಹವನ್ನ ಹೆಚ್ಚುಗೊಳಿಸುತ್ತದೆ ಹಾಗೂ ರಾಜ್ಯದ ಶೈಕ್ಷಣಿಕ ದರ ಕುಸಿತಕ್ಕೆ ಕಾರಣವಾಗಲಿದೆ. ಈ ಗಂಭೀರ ಹಾಗೂ ಸೂಕ್ಷ್ಮ ಕಾಲದಲ್ಲಿ ಬಿಜೆಪಿ ರಾಜಕೀಯದಾಟ ಆಡುತ್ತಿದೆ, ಜನರ ಕಾಳಜಿಯನ್ನು ಕೋರ್ಟ್ ವಹಿಸುತ್ತಿದೆ'
-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ