ಸಂಪುಟ ರಚನೆ: ಮಂಗಳವಾರ ಸಚಿವರ ಪಟ್ಟಿ ಅಂತಿಮ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಹೊಸದಿಲ್ಲಿ, ಆ.2: ಸಚಿವ ಸಂಪುಟ ರಚನೆ ಕುರಿತು ನಾಳೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸೋಮವಾರ ಹೊಸದಿಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಎಷ್ಟು ಮಂದಿ ಸಚಿವರಾಗುತ್ತಾರೆ ಅನ್ನೋದು ನಾಳೆ ಗೊತ್ತಾಗುತ್ತದೆ. ಎಷ್ಟು ಮಂದಿ ಡಿಸಿಎಂ ಆಗುತ್ತಾರೆ ಅನ್ನೋದು ನಾಳೆ ಗೊತ್ತಾಗುತ್ತದೆ ಎಂದರು.
ವರಿಷ್ಠರು ನಾಳೆ ಸಂಜೆ ನೂತನ ಸಚಿವರ ಪಟ್ಟಿ ಪ್ರಕಟಿಸುತ್ತಾರೆ. ಸಚಿವರ ಪ್ರಮಾಣ ವಚನ ದಿನಾಂಕ ಪ್ರಕಟಿಸುತ್ತೇವೆ. ನಾಳೆ ಸಂಜೆ ಬಳಿಕ ಎಲ್ಲದಕ್ಕೂ ಉತ್ತರ ಸಿಗುತ್ತದೆ ಎಂದು ಅವರು ಹೇಳಿದರು.
ಡಿಸಿಎಂ ಸ್ಥಾನಗಳ ಬಗ್ಗೆಯೂ ನಾಳೆಯೇ ಅಂತಿಮ ಆಗುತ್ತದೆ. ಎರಡು ಮೂರು ಪಟ್ಟಿ ಕೊಟ್ಟಿದ್ದೇವೆ. ಹೈಕಮಾಂಡ್ ಒಳ್ಳೆಯ ತೀರ್ಮಾನ ಮಾಡುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಹೇಳಿದರು.
ನಾಳೆ ಸಂಸತ್ ಕಲಾಪದ ನಂತರ ವರಿಷ್ಠರು ಸಭೆ ಸೇರಿ ಸಚಿವರು ಹಾಗೂ ಡಿಸಿಎಂ ಗಳ ಪಟ್ಟಿ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.