ಬಾಲಕನಿಗೆ ಪೊಲೀಸ್ ಅಧಿಕಾರಿಯಿಂದ ಹಲ್ಲೆ ಆರೋಪ: ಎರಡು ದಿನಗಳಲ್ಲಿ ಮಾಹಿತಿ ಬಹಿರಂಗ: ಎಫ್.ಆರ್.ಸೆಬಾಸ್ಟಿಯನ್
ಮೈಸೂರು,ಆ.3: ಪೂಜೆಗಾಗಿ ಬೇವಿನ ಸೊಪ್ಪು ಕೀಳಲು ಹೋದ ವ ವೇಳೆ ಬಾಲಕನನ್ನು ಹಿಡಿದು ತಮ್ಮ ಮನೆಯ ಗೇಟಿಗೆ ಕಟ್ಟುಹಾಕಿ ಪೊಲೀಸ್ ಸಿಬ್ಬಂಧಿಯೋರ್ವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಕುರಿತು ವಿಚಾರಣೆ ಹಂತದಲ್ಲಿದ್ದು, ಇನ್ನೆರಡು ದಿನಗಳಲ್ಲಿ ಇದರ ಸಂಪೂರ್ಣ ಮಾಹಿತಿಯನ್ನು ಬಹಿರಂಗಗೊಳಿಸಲಾಗುವುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಎಫ್.ಆರ್.ಸೆಬಾಸ್ಟಿಯನ್ ತಿಳಿಸಿದರು.
ಈ ಸಂಬಂಧ ‘‘ವಾರ್ತಾಭಾರತಿ’’ಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಪೊಲೀಸ್ ಸಿಬ್ಬಂಧಯೊಬ್ಬರು ಬಾಲಕನನ್ನು ಹಿಡಿದು ಹಲ್ಲೆ ನಡೆಸಿದ್ದಾರೆ ಎಂದು ಒಡನಾಡಿ ಸೇವಾ ಸಂಸ್ಥೆಯ ಸ್ಟ್ಯಾನ್ಲಿ ಅವರು ದೂರು ನೀಡಿದ್ದಾರೆ. ಇದರ ಬಗ್ಗೆ ಬಾಲಕ ಮತ್ತು ಆತನ ಪೋಷಕರಿಂದ ಮಾಹಿತಿ ಪಡೆಯಲಾಗಿದೆ. ಜೊತೆಗೆ ಈ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಸೂಕ್ತ ಕ್ರಮ ಜರುಗಿಸುವಂತೆ ಸೂಚಿಸಲಾಗುತ್ತದೆ ಎಂದು ಹೇಳಿದರು.
ಒಡನಾಡಿಯ ಸ್ಟ್ಯಾನ್ಲಿ ಮಾತನಾಡಿ, ಇದೊಂದು ಗಂಭೀರ ಪ್ರಕರಣವಾಗಿದ್ದು, ಪೊಲೀಸ್ ಅಧಿಕಾರಿ ಎಂದು ಸುಮ್ಮನೆ ಬಿಡಲು ಸಾಧ್ಯವಿಲ್ಲ, ನಮ್ಮ ಸಂಸ್ಥೆಯಿಂದ ಈ ವಿಚಾರವಾಗಿ ಸಂಬಂಧಪಟ್ಟವರ ಬೆನ್ನು ಹತ್ತಲಾಗಿದೆ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈ ವಿಚಾರವನ್ನು ಇಷ್ಟಕ್ಕೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.