ವಕ್ಫ್ ಹಣ ದುರ್ಬಳಕೆ ಆರೋಪ: ಶಾಫಿ ಸಅದಿಗೆ ಶೋಕಾಸ್ ನೋಟಿಸ್ ಜಾರಿ; ಹೈಕೋರ್ಟ್ಗೆ ಸರಕಾರದ ಹೇಳಿಕೆ
ಬೆಂಗಳೂರು, ಆ.5: ಅಧಿಕಾರ ದುರ್ಬಳಕೆ ಮಾಡಿಕೊಂಡು ದುರುದ್ದೇಶದಿಂದ ವಕ್ಫ್ ಮಂಡಳಿಯಿಂದ ಹಣ ಮಂಜೂರು ಮಾಡಿಸಿಕೊಂಡ ಆರೋಪ ಸಂಬಂಧ ರಾಜ್ಯ ವಕ್ಫ್ ಮಂಡಳಿ ಸದಸ್ಯ ಎನ್.ಕೆ. ಮೊಹಮ್ಮದ್ ಶಾಫಿ ಸಅದಿ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೈಕೋರ್ಟ್ಗೆ ರಾಜ್ಯ ಸರಕಾರ ತಿಳಿಸಿದೆ.
ಈ ವಿಚಾರವಾಗಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಹಾಗೂ ಬೆಂಗಳೂರು ನಗರ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಯಾಜ್ ಅಹ್ಮದ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಗುರುವಾರ ಸರಕಾರ ಈ ಮಾಹಿತಿ ನೀಡಿತು.
ಸರಕಾರದ ಪರ ವಾದಿಸಿದ ವಕೀಲರು, ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಫಿ ಸಅದಿ ಅವರಿಗೆ ಆ.2ರಂದು ಶೋಕಾಸ್ ನೋಟಿಸ್ ಜಾರಿಗೊಳಿಸಿ ಏಳು ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಆಗ, ಶಾಫಿ ಸಅದಿ ಪರ ವಕೀಲರು ವಾದ ಮಂಡಿಸಿ, ಶಾಸನಾತ್ಮಕ ಕಾನೂನಿನಡಿ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ಶಾಸನಾತ್ಮಕ ಕಾನೂನು ಅನುಸಾರವೇ ತನಿಖೆ ನಡೆಯಲಿದೆ. ವಿಚಾರಣೆಗೆ ಪರಿಗಣಿಸಲು ಅರ್ಜಿಯಲ್ಲಿ ಏನೂ ಉಳಿದಿಲ್ಲ. ಹೀಗಾಗಿ, ಅರ್ಜಿಯನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದರು. ತನಿಖೆಗೆ ಹಿಂಜರಿಯುತ್ತಿರುವುದೇಕೆ ಎಂದು ಅರ್ಜಿದಾರರ ಪರ ವಕೀಲ ಶ್ರೀಧರ ಪ್ರಭು ಪ್ರಶ್ನಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠ, ಈ ಹಂತದಲ್ಲಿ ಅರ್ಜಿ ಇತ್ಯರ್ಥಪಡಿಸುವುದಿಲ್ಲ. ಆರೋಪ ಕೇಳಿ ಬಂದಿರುವ ಪ್ರತಿವಾದಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ಶೋಕಾಸ್ ನೋಟಿಸ್ನ ಫಲಿತಾಂಶ ಏನು ಬರುತ್ತದೆ ಎಂದು ನೋಡಬೇಕಾಗುತ್ತದೆ. ಅಲ್ಲದೇ ಶೋಕಾಸ್ ನೋಟಿಸ್ ಆಧರಿಸಿ ಕೈಗೊಂಡ ಕ್ರಮದ ವಿವರ ಸಲ್ಲಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಸೆ.14ಕ್ಕೆ ಮುಂದೂಡಿತು.
ರಾಜ್ಯ ವಕ್ಫ್ ಮಂಡಳಿಯ ಹಾಲಿ ಸದಸ್ಯರಾಗಿರುವ ಶಾಫಿ ಸಅದಿ ಅವರು ಸಾದಿಯಾ ಎಜುಕೇಷನಲ್ ಫೌಂಡೇಷನ್ನ ಪ್ರಧಾನ ಕಾರ್ಯದರ್ಶಿ ಸಹ ಆಗಿದ್ದಾರೆ. ಈ ಫೌಂಡೇಷನ್ಗೆ ಒಳಪಟ್ಟಿರುವ ಬನ್ನೇರುಘಟ್ಟ ರಸ್ತೆಯಲ್ಲಿರುವ ಸಾದಿಯಾ ಮಸೀದಿಯ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ವಕ್ಫ್ ಮಂಡಳಿಯಿಂದ 15 ಲಕ್ಷ ರೂ. ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಈಗಾಗಲೇ ಮಸೀದಿಗೆ ಕಾಂಪೌಂಡ್ ಗೋಡೆ ಇದ್ದರೂ, ಸುಳ್ಳು ದಾಖಲೆಗಳನ್ನು ಸಲ್ಲಿಸಿ ಹಣ ಮಂಜೂರು ಮಾಡಿಸಿಕೊಳ್ಳುವ ಮೂಲಕ ಶಾಫಿ ಸಅದಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ವಕ್ಪ್ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿರುವ ಶಫಿ ಸಾದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.