ರಾಜಕೀಯದಲ್ಲಿ ನನ್ನನ್ನು ರಕ್ಷಿಸುವವರಿದ್ದಾರೆ ಎನ್ನುವುದು ಭ್ರಮೆಯಷ್ಟೇ: ಸಚಿವ ಆನಂದ್ ಸಿಂಗ್
ವಿಜಯನಗರ : ನಾನು ಹೊಸಪೇಟೆ ಕ್ಷೇತ್ರದಿಂದ 4 ಬಾರಿ ಗೆದ್ದಿದ್ದೇನೆ. ನನ್ನ ರಾಜಕೀಯ ಜೀವನ ತುಂಬಾ ಸಣ್ಣದು. ದೊಡ್ಡ ರಾಜಕೀಯ ನಾಯಕ ನಾನಲ್ಲ, ಎಲ್ಲೋ ಹೋಗಿ ಬ್ಲಾಕ್ ಮೇಲ್ ತಂತ್ರವನ್ನು ನಾನು ಮಾಡುವುದಿಲ್ಲ. ನನ್ನನ್ನು ರಕ್ಷಣೆ ಮಾಡುವವರು ರಾಜಕೀಯದಲ್ಲಿ ದ್ದಾರೆಂದು ಭಾರೀ ವಿಶ್ವಾಸದಲ್ಲಿದ್ದೆ. ಆದರೆ ನಾನು ಕೇವಲ ಭ್ರಮೆಯಲ್ಲಿದ್ದೆ ಅನಿಸುತ್ತೆ. ಆಸೆ, ಆಕಾಂಕ್ಷೆ ಕಳೆದುಕೊಂಡಿದ್ದೇನೆ. 4 ಗೋಡೆ ಮಧ್ಯೆ ಕಷ್ಟ ಹೇಳಿಕೊಂಡಿದ್ದೇನೆ ಎಂದು ಸಚಿವ ಆನಂದ್ ಸಿಂಗ್ ಬುಧವಾರ ಹೊಸಪೇಟೆಯಲ್ಲಿ ಹೇಳಿದ್ದಾರೆ.
ಯಡಿಯೂರಪ್ಪ ಅವರಿಗೆ ಒತ್ತಡ ಹೇರುವುದಿಲ್ಲ. ಅವರು ನನ್ನ ಎಲ್ಲ ಬೇಡಿಕೆ ಈಡೇರಿಸಿದ್ದಾರೆ. ನನಗೆ ಹೊಗಳೋಕೆ ಬರಲ್ಲ. ಹೊಗಳೋ ಕಲೆ ನನಗೆ ಬಂದಿಲ್ಲ. ನನ್ನ ರಾಜಕೀಯ ಜೀವನ ಹೊಸಪೇಟೆಯ ಗೋಪಾಲಕೃಷ್ಣ ದೇವಸ್ಥಾನದಲ್ಲಿಯೇ ಆರಂಭವಾಗಿತ್ತು. ಅದು ಇಲ್ಲಿಯೇ ಅಂತ್ಯವಾಗಬಹುದು. ದೇವರ ಕೃಪೆ ಇದ್ದರೆ ಇಲ್ಲಿಯೇ ಪುನರಾರಂಭವಾಗಲೂಬಹುದು. ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ನನ್ನ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಸಿಎಂ ಭೇಟಿಗೆ ಇನ್ನೂ ನಿರ್ಧರಿಸಿಲ್ಲ. ಇಂದು ಇಲ್ಲವೇ ನಾಳೆ ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿದ್ದಾರೆ.
ಬಿಎಸ್ ವೈ ಸರಕಾರದಲ್ಲಿ ಸಚಿವರಾಗಿದ್ದ ಆನಂದ್ ಸಿಂಗ್, ಅವರು ಪ್ರಬಲ ಎನಿಸುವ ಇಂಧನ ಹಾಗೂ ಕೈಗಾರಿಕೆ ಖಾತೆಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅದು ಸಿಗಲಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆನಂದ್ ಸಿಂಗ್ ಅವರು ಹೊಸಪೇಟೆಯ ರಾಣಿಪೇಟೆಯಲ್ಲಿರುವ ತಮ್ಮ ನಿವಾಸದಲ್ಲೇ ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ಕಾರ್ಯಾಲಯ ಮಾಡಿಕೊಂಡಿದ್ದರು. ಇದನ್ನು ತೆರವುಗೊಳಿಸಿರುವ ಬೆಳವಣಿಗೆ ಹಲವು ಊಹಾಪೋಹಕ್ಕೆ ಕಾರಣವಾಗಿದೆ.