ನಮ್ಮಲ್ಲಿ ಬೆಂಕಿಯೂ ಇಲ್ಲ, ಬಂಡಾಯವೂ ಇಲ್ಲ: ಸಚಿವ ಶ್ರೀರಾಮುಲು
ಬೆಂಗಳೂರು, ಆ.11: ನಮ್ಮಲ್ಲಿ ಬೆಂಕಿಯೂ ಇಲ್ಲ ಬಂಡಾಯವೂ ಇಲ್ಲ. ನನಗೆ ಯಾವ ಅಸಮಾಧಾನವೂ ಆಗಿಲ್ಲ. ಪಕ್ಷ ನೀಡಿರುವ ಜವಾಬ್ದಾರಿ ನಿರ್ವಹಿಸಿಕೊಂಡು ಹೋಗುತ್ತೇನೆ. ಕೊಟ್ಟಿರುವ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿ ಜನಪರ ಆಡಳಿತ ನೀಡುತ್ತೇನೆ ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಬುಧವಾರ ಮುಖ್ಯಮಂತ್ರಿಯ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷ ಜನಪರವಾದ, ಜನಸೇವೆ ಮಾಡುವ ಆಡಳಿತ ನೀಡುತ್ತದೆ. ನಮಗೆ ಯಾವ ಇಲಾಖೆಯ ಜವಾಬ್ದಾರಿ ನೀಡಿದ್ದಾರೋ, ಅದನ್ನು ಸಮರ್ಥವಾಗಿ ನಿರ್ವಹಿಸುತ್ತೇವೆ ಎಂದರು.
ಜನಸೇವೆ ಮುಖ್ಯವಾಗಬೇಕೇ ಹೊರತು, ಇಲಾಖೆ ಮುಖ್ಯವಲ್ಲ. ನನಗೆ ಕೊಟ್ಟಿರುವ ಇಲಾಖೆಯಲ್ಲಿ ಜನರು ಮೆಚ್ಚುವಂತಹ ಕೆಲಸ ಮಾಡುತ್ತೇನೆ. ಉಪ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಬಹಳಷ್ಟು ಮಂದಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈಗಿರುವ ರಾಜಕೀಯ ವಾತಾವರಣದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಬೇಡ ಎಂದು ನಮ್ಮ ರಾಷ್ಟ್ರೀಯ ನಾಯಕರು ಕೈಗೊಂಡು ತೀರ್ಮಾನಕ್ಕೆ ನಾವೆಲ್ಲ ಬದ್ಧವಾಗಿದ್ದೇವೆ ಎಂದು ಶ್ರೀರಾಮುಲು ಹೇಳಿದರು.