ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಜಾತಿಗಣತಿ ವರದಿ ಜಾರಿ: ವಿಪಕ್ಷ ನಾಯಕ ಸಿದ್ದರಾಮಯ್ಯ
ಮೈಸೂರು,ಆ.11: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಜಾತಿಗಣತಿ ವರದಿ ಸ್ವೀಕರಿಸಿ ಚರ್ಚೆಗೆ ಇಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ನಗರದ ತಮ್ಮ ನಿವಾಸದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಜಾತಿಗಣತಿ ಮಾಡಿಸಲು ಮುಂದಾದೆ. ಸರ್ವೇ ಕಾರ್ಯ ಮುಗಿಯುವವರೆಗೆ ನನ್ನ ಅಧಿಕಾರಾವಧಿ ಮುಕ್ತಾಯ ಆಯಿತು. ಮುಂದೆ ಬಂದ ಮೈತ್ರಿ ಸರ್ಕಾರ ಇದರ ಯೋಜನೆಯನ್ನು ಕೈಗೆತ್ತಿಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಾತಿ ಗಣತಿಯಿಂದ ರಾಜ್ಯದಲ್ಲಿ ಯಾವ ಜಾತಿಯವರು ಎಷ್ಟು ಇದ್ದಾರೆ ಎಂಬುದು ತಿಳಿಯುತ್ತದೆ. ಇದರಿಂದ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಮಾಜಿಕವಾಗಿ ಹಿಂದುಳಿದವರಿಗೆ ವಿಶೇಷ ಒತ್ತು ನೀಡಿ ಅವರಿಗೆ ಸಹಾಯ ಮಾಡಬಹುದು. ನನ್ನ ಅವಧಿ ನಂತರ ಯಾವ ಸರ್ಕಾರಗಳು ಜಾತಿಗಣತಿ ವರದಿ ಸ್ವೀಕರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರು ಘೋಷಣೆ ಮಾಡಿರುವ ಯಾವುದಾದರನ್ನು ಈಡೇರಿಸಿದ್ದಾರೆಯೇ? ವರ್ಷದ ಹಿಂದೆ ಆಟೋ,ಟ್ಯಾಕ್ಸಿ, ಕ್ಯಾಬ್ ಚಾಲಕರಿಗೆ 5 ಸಾವಿರ ರೂ. ಕೊಡುವುದಾಗಿ ಹೇಳಿದ್ದರು. ಅದನ್ನು ನೀಡಿದ್ದಾರ? ಈಗ ಕೋವಿಡ್ ನಿಂದ ಮೃತಪಟ್ಟ ಬಿಪಿಎಲ್ ಕುಟುಂಬದವರಿಗೆ ಒಂದು ಲಕ್ಷ ರೂ. ಪರಿಹಾರ ನೀಡುತ್ತೇವೆ ಎಂದು ಹೇಳಿರುವುದು ಬರೀ ಘೋಷಣೆ ಮಾತ್ರ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ.