ಕಾಂಗ್ರೆಸ್ನವರ 'ಫ್ಯೂಸ್' ಅನ್ನು ಅವರೇ ಕಿತ್ತುಕೊಳ್ಳುತ್ತಿದ್ದಾರೆ: ಸಚಿವ ಈಶ್ವರಪ್ಪ
ಸಚಿವ ಕೆ.ಎಸ್.ಈಶ್ವರಪ್ಪ
ಚಿಕ್ಕಮಗಳೂರು, ಆ.24: 'ಕಾಂಗ್ರೆಸ್ನವರ ಫ್ಯೂಸ್ ಅನ್ನು ಎಚ್.ಡಿ.ಕುಮಾರಸ್ವಾಮಿ ಕಿತ್ತು ಹಾಕುವ ಆವಶ್ಯಕತೆಯಿಲ್ಲ, ಕಾಂಗ್ರೆಸ್ನ ಒಬ್ಬೊಬ್ಬರ ಫ್ಯೂಸನ್ನು ಮತ್ತೊಬ್ಬರು ಕಿತ್ತು ಹಾಕಿಕೊಳ್ಳುತ್ತಿದ್ದಾರೆ' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.
ಮಂಗಳವಾರ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 'ಕಾಂಗ್ರೆಸ್ನಲ್ಲಿ ನಾಲ್ಕೈದು ಜನ ನಾಯಕರಿದ್ದಾರೆ. ಕಾಂಗ್ರೆಸ್ನಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ, ಕಾಂಗ್ರೆಸ್ನಲ್ಲಿ ನೇರ ಗುಂಪುಗಾರಿಕೆ ಇದೆ. ಒಂದು ಸಲ ಬಹಿರಂಗವಾಗಿತ್ತು. ಮುಂದೆಯೂ ಆಗಲಿದೆ. ಕಾಂಗ್ರೆಸ್ನೊಳಗೆ ಹೊರಗಿನಿಂದ ಬಂದವರು, ಒಳಗಿನ ಕಾಂಗ್ರೆಸಿಗರು ಎಂಬ ಕೂಗು ಎದ್ದಿತ್ತು. ಸದ್ಯಕ್ಕೆ ಆ ಪಕ್ಷದ ನಾಯಕರು ಹೊರಗಿನಿಂದ ಬಂದವರ ತಲೆಮೇಲೆ ತಟ್ಟಿ ಕೂಗು ನಿಲ್ಲಿಸಿದ್ದಾರೆ. ಅದು ಯಾವಾಗ ಪ್ರಜ್ವಲಿಸಿ ಸ್ಪೋಟಗೊಳ್ಳುತ್ತೋ ಕಾಂಗ್ರೆಸ್ನವರಿಗೂ ಗೊತ್ತಿಲ್ಲ' ಎಂದು ಟೀಕಿಸಿದರು.
'ಜಾತಿಗಣತಿ ಚರ್ಚೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿಗೆ ಹಣ ಬಿಡುಗಡೆ ಮಾಡಲು ತೋರಿದ ಆಸಕ್ತಿಯನ್ನು ಅದನ್ನು ಬಿಡುಗಡೆ ಮಾಡಲು ಏಕೆ ಆಸಕ್ತಿ ತೋರಲಿಲ್ಲ ಎಂಬುದನ್ನು ಅವರು ಬಹಿರಂಗಪಡಿಸಬೇಕು. ಮುಖ್ಯಮಂತ್ರಿಯಾಗಿದ್ದಾಗ ವರದಿ ಸಿದ್ದವಾಗಿರಲಿಲ್ಲ ಎಂದು ಸುಳ್ಳು ಹೇಳುತ್ತಾರೆ, ಹೋಗಲಿ ಸಮ್ಮಿಶ್ರ ಸರಕಾರದ ಅವಧಿಯಲ್ಲಾದರೂ ಬಿಡುಗಡೆ ಮಾಡಬಹುದಿತ್ತಲ್ಲ ಎಂದು ಪ್ರಶ್ನಿಸಿದ ಅವರು, ಎಚ್.ಡಿ.ಕುಮಾರಸ್ವಾಮಿಯವರು ಬಿಡುಗಡೆ ಮಾಡಲಿಲ್ಲ ಎಂದರೇ ಅಧಿಕಾರದ ಆಸೆಗಾಗಿ ಅವರ ಜೊತೆ ಇದ್ದರಾ? ' ಎಂದು ಪ್ರಶ್ನಿಸಿದರು.
'ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿಯವರಿಗೆ ಜಾತಿಗಣತಿ, ಮೀಸಲಾತಿ ಮೇಲೆ ಆಸಕ್ತಿಯಿಲ್ಲ, ಅದಕ್ಕೆ ಹೋರಾಟ ಮಾಡುತ್ತೇವೆಂದು ಹೇಳುತ್ತಿರುವುದು ರಾಜಕೀಯ ಕುತಂತ್ರವಲ್ಲದೆ ಇನ್ನೇನು ಎಂದ ಅವರು, ಕಾಂಗ್ರೆಸ್ನವರೇ ಇದಕ್ಕೆ ಉತ್ತರ ನೀಡಬೇಕು. ಹಿಂದೂಳಿದ ವರ್ಗಗಳ ಕಮಿಟಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರೊಂದಿಗೆ ಗುರುವಾರ ಚರ್ಚಿಸಿ ಮೀಸಲಾತಿ ಸಂಬಂಧ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ' ಎಂದರು.
'ಗ್ರಾಮ ಪಂಚಾಯತ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಅನುದಾನ ಬರಬೇಕಿತ್ತು, ಅದು ಬಂದಿದೆ. ಯಾವ ಪಂಚಾಯತ್ಗೆ ಹಣ ಬಂದಿಲ್ಲವೆಂಬುದನ್ನು ತನ್ನ ಗಮನಕ್ಕೆ ತಂದರೆ ಸ್ವತಃ ಆಸಕ್ತಿವಹಿಸಿ ಹಣ ಬಿಡುಗಡೆಗೊಳಿಸಲಾಗುವುದು' ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯೆ ನೀಡಿದರು.