ಶಾಸಕ ಎನ್.ಮಹೇಶ್ ಅವರಿಗೆ ಎಲ್ಲಿಯೂ ನೆಲೆ ಇಲ್ಲದಂತಾಗಿದೆ: ಎಂ.ಪಿ.ಕುಮಾರಸ್ವಾಮಿ
''ಹಿಂದೂಧರ್ಮವನ್ನು ಮನುಧರ್ಮ ಎಂದು ನಿಂದಿಸಿದವರನ್ನು ಮಂತ್ರಿ ಮಾಡಲು ವಿರೋಧವಿದೆ''
ಶಾಸಕ ಎಂ.ಪಿ.ಕುಮಾರಸ್ವಾಮಿ
ಚಿಕ್ಕಮಗಳೂರು, ಆ.24: ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರಿಗೆ ಎಲ್ಲಿಯೂ ನೆಲೆ ಇಲ್ಲದಂತಾಗಿದೆ. ನೆಲೆಯನ್ನು ಹುಡುಕಿಕೊಂಡು ಬಿಜೆಪಿಗೆ ಬಂದಿದ್ದಾರೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶಾಸಕನಾಗಿದ್ದರೂ ಸಚಿವರಾಗಿರುವವರಿಗಿಂತ ಹೆಚ್ಚು ಸಂತೋಷವಾಗಿದ್ದೇನೆ. ಜನರಿಗಾಗಿ ಉತ್ತಮ ಕೆಲಸ ಮಾಡುತ್ತೇನೆ. ಪಕ್ಷಕ್ಕಾಗಿ ದುಡಿದವರನ್ನು ಸಚಿವರನ್ನಾಗಿ ಮಾಡಬೇಕಿತ್ತು. ಕೊಳ್ಳೆಗಾಲ ಶಾಸಕ ಎನ್.ಮಹೇಶ್ ಅವರು ಹಿಂದೂ ಧರ್ಮದ ಬಗ್ಗೆ ಹೀನಾಯವಾಗಿ ಬೈದಾಡಿಕೊಂಡಿದ್ದವರು. ಹಿಂದೂ ಧರ್ಮವನ್ನು ಮನುಧರ್ಮ ಎಂದು ಜಾತಿ, ಧರ್ಮ ಎತ್ತಿಕಟ್ಟಿ ಅವರು ಶಾಸಕರಾಗಿದ್ದಾರೆ. ಒಂದು ಜನಾಂಗವನ್ನು ಮತ್ತೊಂದು ಜನಾಂಗಗಳ ನಡುವೆ ಎತ್ತಿಕಟ್ಟಿದ್ದವರು. ಇದರಿಂದಲೇ ಅವರು ಶಾಸಕರಾಗಿದ್ದಾರೆ. ಅಂತಹವರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಹಿಂದೂ ಧರ್ಮವನ್ನು, ವೈದಿಕ ಧರ್ಮವನ್ನು ಬೈದಿದ್ದಕ್ಕೆ ಬಹುಮಾನವಾಗಿ ಮಂತ್ರಿ ಮಾಡುತ್ತಾರೆ ಎಂದೇನಿಲ್ಲ. ಹಿಂದೂ ಧರ್ಮವನ್ನು ಮನುಧರ್ಮ ಎಂದವರನ್ನು ಮಂತ್ರಿ ಮಾಡಲು ವಿರೋಧವಿದೆ ಎಂದರು.