ಮುಗ್ಧ ಜನರನ್ನು ವಂಚಿಸಿದವರು ಸಚಿವರಾಗಲು ಅರ್ಹರಲ್ಲ: ಎನ್.ಮಹೇಶ್ ವಿರುದ್ಧ ಶಾಸಕ ಎಂ.ಪಿ.ಕುಮಾರಸ್ವಾಮಿ ಆಕ್ರೋಶ
ಎಂ.ಪಿ.ಕುಮಾರಸ್ವಾಮಿ ಎನ್.ಮಹೇಶ್
ಬೆಂಗಳೂರು: ಬಿಎಸ್ಪಿ ಪಕ್ಷದಿಂದ ಬಿಜೆಪಿ ಪಕ್ಷ ಸೇರಿರುವ ಎನ್.ಮಹೇಶ್ ಅವರನ್ನು ಮುಂಬರುವ ದಿನಗಳಲ್ಲಿ ಸಂಪುಟಕ್ಕೆ ತೆಗೆದುಕೊಳ್ಳಲು ವಿರೋಧ ವ್ಯಕ್ತಪಡಿಸಿರುವ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಮಹೇಶ್ ಅವರು ಅಮಾಯಕ, ಮುಗ್ದ ಜನರನ್ನು ವಂಚಿಸಿ ಶಾಸಕರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು, 'ಮುಂಬರುವ ದಿನಗಳಲ್ಲಿ ಯಾವುದೇ ಕಾರಣಕ್ಕೂ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಬಾರದು, ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವ ಒಂದೇ ಉದ್ದೇಶಕ್ಕೆ ಅವರನ್ನು ಪಕ್ಷಕ್ಕೆ ಕರೆತರುವದಾದರೆ ಹಾಲಿ ಪಕ್ಷದಲ್ಲಿ ಅನೇಕ ವರ್ಷಗಳಿಂದ ಇರುವ ಬಲಗೈ ಸಮುದಾಯಕ್ಕೆ ಸೇರಿರುವ ಮೂರು ಮಂದಿ ಶಾಸಕರಿಗೆ ಮೂರು ಕಾಸಿನ ಬೆಲೆ ಇಲ್ಲ ಎಂಬ ಅಭಿಪ್ರಾಯ ಬರಲಿದೆ' ಎಂದು ಹೇಳಿದ್ದಾರೆ.
ಬಿಎಸ್ಪಿ ಪಕ್ಷದಲ್ಲಿದ್ದಾಗ ಎನ್ .ಮಹೇಶ್ ಅವರು, ಹಿಂದೂ ಧರ್ಮ, ಹಿಂದೂ ದೇವಾಲಯಗಳು, ಬಿಜೆಪಿ ಪಕ್ಷದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಬಿಜೆಪಿ ಪಕ್ಷದಲ್ಲಿ ಸ್ಥಾನಮಾನಗಳನ್ನು ಪಡೆಯಬೇಕಾದರೆ. ಹಿಂದೂ ದೇವಾಲಯಗಳ, ಧರ್ಮ ಕ್ಷೇತ್ರಗಳ ಮುಂದಿನ ಕಸ ಗುಡಿಸಲಿ. ಮುಗ್ದ ಜನರನ್ನು ವಂಚಿಸಿ ಶಾಸಕರಾಗಿರುವ ಅವರು ನಮ್ಮಂತೆ 20 ವರ್ಷಗಳ ಕಾಲ ಪಕ್ಷ ಸಂಘಟನೆಯಲ್ಲಿ ತೊಡಗಿಸಿ ಕೊಂಡು ಸ್ಥಾನ ಅನುಭವಿಸಲಿ ಎಂದು ತಿಳಿಸಿದ್ದಾರೆ.