ಮೆಟ್ರೋ ರೈಲು ಉದ್ಘಾಟನೆ ಕಾರ್ಯಕ್ರಮ: ಕನ್ನಡ ಕಡೆಗಣಿಸಿರುವ ಉದ್ದಟತನ ಸಹಿಸಲು ಸಾಧ್ಯವಿಲ್ಲ: ದಿನೇಶ್ ಗುಂಡೂರಾವ್
ಬೆಂಗಳೂರು, ಆ. 29: `ಕೆಂಗೇರಿ ನೇರಳೆ ಮಾರ್ಗದ ನಮ್ಮ ಮೆಟ್ರೋ ರೈಲು ಉದ್ಘಾಟನೆ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡೆಗಣಿಸಿರುವುದು ಕರ್ನಾಟಕಕ್ಕೆ ಮಾಡಿದ ಅವಮಾನ. ಸರಕಾರಿ ಕಾರ್ಯಕ್ರಮದಲ್ಲೇ ಕನ್ನಡ ಕಡೆಗಣಿಸಿರುವ ಉದ್ದಟತನ ಸಹಿಸಲು ಸಾಧ್ಯವಿಲ್ಲ. ನಮ್ಮ ಮೆಟ್ರೋ ಯೋಜನೆ ಕೇಂದ್ರ ಹಾಗೂ ರಾಜ್ಯದ ಸಹಭಾಗಿತ್ವದ ಯೋಜನೆ. ಹೀಗಿರುವಾಗ ಕನ್ನಡಕ್ಕೂ ಆದ್ಯತೆ ಇರಬೇಕಲ್ಲವೆ.?' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವಿವಾರ ಸರಣಿ ಟ್ವೀಟ್ ಮಾಡಿರುವವರು, `ಬಿಎಂಆರ್ಸಿಎಲ್ ಆಗಿಂದಲೂ ಕನ್ನಡಕ್ಕೆ ಅಪಮಾನ ಮಾಡುವ ಕೆಲಸ ಮಾಡುತ್ತಿದೆ. ದುರುದ್ದೇಶದಿಂದಲೇ ಇಂದಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣಿಸಲಾಗಿದೆ. ದುರಂತವೆಂದರೆ ಸಿಎಂ
ಬಸವರಾಜ ಬೊಮ್ಮಾಯಿಯವರಾದರೂ ಕನ್ನಡದ ಭಾಷಾಭಿಮಾನ ತೋರಬೇಕಿತ್ತು. ಆದರೆ, ಕೇಂದ್ರದವರನ್ನು ಮೆಚ್ಚಿಸಲು ಕಾರ್ಯಕ್ರಮವನ್ನು ಇಂಗ್ಲಿಷ್ ಮಯ ಮಾಡಲು ಅವಕಾಶ ಕೊಟ್ಟಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದಾರೆ.
`ಬಿಜೆಪಿ `ಏಕ ಭಾಷೆ-ಏಕ ರಾಷ್ಟ್ರ' ಪರಿಕಲ್ಪನೆಯಲ್ಲಿ ಪ್ರಾದೇಶಿಕ ಭಾಷೆಗಳನ್ನು ದಮನ ಮಾಡುತ್ತಿದೆ. ಇಂದಿನ ಮೆಟ್ರೋ ಉದ್ಘಾಟನೆಯಲ್ಲಿ ಕನ್ನಡಕ್ಕೆ ಅಪಮಾನ ಮಾಡಿದ್ದೇ ಈ ಅಜೆಂಡಾದಿಂದ. ಆದರೆ, ಕನ್ನಡವನ್ನು ಕೊಲೆ ಮಾಡುವ ಪ್ರಯತ್ನವನ್ನು ಕನ್ನಡಿಗರು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕನ್ನಡ ಕೇವಲ ಭಾಷೆಯಲ್ಲ, ಅದು ಕನ್ನಡಿಗರ ಆತ್ಮ' ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
1
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 29, 2021
ಕೆಂಗೇರಿ ನೇರಳೆ ಮಾರ್ಗದ ನಮ್ಮ ಮೆಟ್ರೋ ಉದ್ಘಾಟನೆ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡೆಗಣಿಸಿರುವುದು ಕರ್ನಾಟಕಕ್ಕೆ ಮಾಡಿದ ಅವಮಾನ.
ಸರ್ಕಾರಿ ಕಾರ್ಯಕ್ರಮದಲ್ಲೇ ಕನ್ನಡ ಕಡೆಗಣಿಸಿರುವ ಉದ್ದಟತನ ಸಹಿಸಲು ಸಾಧ್ಯವಿಲ್ಲ.
ನಮ್ಮ ಮೆಟ್ರೋ ಯೋಜನೆ ಕೇಂದ್ರ ಹಾಗೂ ರಾಜ್ಯದ ಸಹಭಾಗಿತ್ವದ ಯೋಜನೆ.
ಹೀಗಿರುವಾಗ ಕನ್ನಡಕ್ಕೂ ಆದ್ಯತೆ ಇರಬೇಕಲ್ಲವೆ.?