ಓಲೈಕೆ ರಾಜಕಾರಣದಿಂದ ಮತ್ತಷ್ಟು ಪಾಕಿಸ್ತಾನ ಸೃಷ್ಟಿಯಾಗಲಿದೆ: ಕಾಂಗ್ರೆಸ್ ವಿರುದ್ಧ ಸಿಟಿ ರವಿ ವಾಗ್ದಾಳಿ
''ದೇಶಭಕ್ತಿ ಮತ್ತು ಭಯೋತ್ಪಾದನೆಗೆ ವ್ಯತ್ಯಾಸ ತಿಳಿಯದ ಕಾಂಗ್ರೆಸ್ ಆರೆಸ್ಸೆಸ್ ಮತ್ತು ತಾಲಿಬಾನ್ ಹೋಲಿಸುತ್ತಿದೆ"
ಕಲಬುರಗಿ: 'ಕಾಂಗ್ರೆಸ್ ನ ಓಲೈಕೆ ರಾಜಕಾರಣದಿಂದ ಮತ್ತಷ್ಟು ಪಾಕಿಸ್ತಾನ ಸೃಷ್ಟಿಯಾಗಲಿವೆ' ಎಂದು ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, 'ದೇಶ ಭಕ್ತಿಗೂ ಭಯೋತ್ಪಾದನೆಗೂ ಇರುವ ವ್ಯತ್ಯಾಸ ಗುರುತಿಸಲಾರದ ಅಂಧತ್ವ ಕಾಂಗ್ರೆಸ್ ಗೆ ಬಂದಿದೆ. ಅದಕ್ಕಾಗಿ ಆರೆಸ್ಸೆಸ್ ಜೊತೆಗೆ ತಾಲಿಬಾನ್ ಗಳನ್ನು ಸಮೀಕರಿಸುವ ರಾಜಕಾರಣ ಕಾಂಗ್ರೆಸ್ ಮಾಡುತ್ತಿದೆ. ನಾವು ಯಾರನ್ನು ಓಲೈಸುವುದಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬಕ್ ಕಾ ವಿಶ್ವಾಸ, ಸಬಕಾ ಪ್ರಯಾಸ್ ಎಂಬ ಮಂತ್ರ ನಮ್ಮದಾಗಿದೆ 'ಎಂದರು.
'ಚುನಾವಣೆಗಳು ಬಂದಾಗ ಸಿದ್ಧರಾಮಯ್ಯನವರು ರೆಸ್ಟ್ ಮಾಡಲು ಹೋಗುವುದಲ್ಲದೇ ಅಲ್ಲಿಂದ ಕೆಲವು ಸಂದೇಶಗಳನ್ನು ಕೊಡುತ್ತಾರೆ. ಕೆಲವೊಮ್ಮೆ ಸಿದ್ಧರಾಮಯ್ಯನವರೇ ನೇರವಾಗಿ ಸಂದೇಶ ಕೊಡ್ತಾರೆ, ಕೆಲವೊಮ್ಮೆ ಹಿಂಬಾಲಕರ ಮೂಲಕ ಸಂದೇಶ ರವಾನಿಸುತ್ತಾರೆ, ಆದರೆ ಈ ಬಾರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆ ಗೆಲ್ಲಬಾರದೆಂಬ ಸಂದೇಶ ನೀಡಿದ್ದಾರೆ.ರಾಜ್ಯದ ಮೂರು ಮಹಾನಗರಪಾಲಿಕೆಗಳಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಲಿದೆ' ಎಂದು ಭವಿಷ್ಯ ನುಡಿದಿದ್ದಾರೆ. ಎಂದು ಆರೋಪ ಮಾಡಿದರು.
'ಕಳೆದ 20 ವರ್ಷದಿಂದ ಕಾಂಗ್ರೆಸ್ ಪಕ್ಷ ಹೊಸ ಅಧ್ಯಕ್ಷರ ಹುಡುಕಾಟದಲ್ಲಿ ನಿರತವಾಗಿದೆ, ರಾಜ್ಯದ ಕಾಂಗ್ರೆಸ್ ಅಧ್ಯಕ್ಷರಿಗೆ ಇನ್ನೂ ಕೂಡ ತಂಡ ಕಟ್ಟಿಕೊಳ್ಳೋಕೆ ಆಗ್ತಿಲ್ಲ, ಪಕ್ಷದ ತಂಡವನ್ನೇ ಕಟ್ಟಿಕೊಳ್ಳೊಕ್ಕೆ ಆಗದಿರೋರು ಅಧಿಕಾರಕ್ಕೆ ಬರಲು ಹಗಲುಗನಸು ಕಾಣುವ ನೈತಿಕತೆ ಎಲ್ಲಿದೆ' ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದ್ಯಸ ಶಶೀಲ್ ಜಿ ನಮೋಶಿ, ಬಾಬುರಾವ್ ಚಿಂಚನಸೋರ್ ಸೇರಿದಂತೆ ಇತರರು ಇದ್ದರು.