ಶಿವಮೊಗ್ಗ : ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮಲೆನಾಡು ರೈತರ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ
ಶಿವಮೊಗ್ಗ, ಸೆ.03: ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕೆಂಬುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮಲೆನಾಡು ರೈತರ ಹೋರಾಟ ಸಮಿತಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಭದ್ರಾವತಿ ತಾಲೂಕು ಹೊಳೆಹೊನ್ನೂರು ಹೋಬಳಿಯ ವಿವಿಧ ಗ್ರಾಮಗಳ ರೈತರು ಪೋಡಿ ಮಾಡಿಸುವುದು ಸೇರಿದಂತೆ ಸಾಗುವಳಿ ಪತ್ರ ನೀಡಬೇಕೆಂದು ಹಲವು ವರ್ಷಗಳಿಂದ ಪ್ರತಿಭಟನೆ ಮಾಡುತ್ತಿದ್ದರೂ ಕೂಡ ಯಾವುದೇ ಪ್ರಯೋಜವಾಗುತ್ತಿಲ್ಲ ಎಂದು ದೂರಿದರು.
ಶರಾವತಿ ಮುಳುಗಡೆ ಸಂತ್ರಸ್ತ ರೈತರಿಗೆ ಪುನರ್ವಸತಿ ಕಲ್ಪಿಸಬೇಕು. ಮಲ್ಲಿಗೇನಹಳ್ಳಿ, ಇಟ್ಟಿಗೆಹಳ್ಳಿ, ದಿಗ್ಗೇನಹಳ್ಳಿ, ಯಡೇಹಳ್ಳಿ, ತಡಸ ಗ್ರಾಮ, ಹಂಚಿನ ಸಿದ್ಧಾಪುರ, ಗುಡುಮಗಟ್ಟ, ಹನುಮಂತಾಪುರ, ಚಂದನಕೆರೆ, ಕುರುಬ ವಿಠಲಾಪುರ, ಮುಂತಾದ ಗ್ರಾಮಗಳಲ್ಲಿ ರೈತರು ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದು ಇದುವರೆಗೂ ಹಕ್ಕುಪತ್ರ ನೀಡಿಲ್ಲ. ಮತ್ತು ಖಾತೆ ವರ್ಗಾವಣೆ ಮಾಡಿಲ್ಲ. ಗೋಮಾಳದ ಜಮೀನನ್ನು ಪೋಡಿ ಮಾಡಿಸಿಕೊಟ್ಟಿಲ್ಲ. ಜಂಟೀ ಸರ್ವೇ ಮಾಡಿಲ್ಲ. ಕೂಡಲೇ ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆಗಳನ್ನು ಬಗೆಹರಿಸಿ ಈ ಎಲ್ಲ ಗ್ರಾಮಗಳ ರೈತರಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತೀ.ನಾ. ಶ್ರೀನಿವಾಸ್, ಹೊಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹನುಮಂತು, ಕಾರ್ಯದರ್ಶಿ ನಾಗರಾಜ್, ಪ್ರಮುಖರಾದ ಕೃಷ್ಣೋಜಿರಾವ್, ಯಲ್ಲೋಜಿರಾವ್, ಅಣ್ಣಾಮಲೈ, ಕೃಷ್ಣಪ್ಪ, ಪರಸಪ್ಪ, ವಿನಯ್ ಇದ್ದರು.