ನಾಲ್ಕು ಜಿಲ್ಲೆಗಳಲ್ಲಿ 'ವಾರಾಂತ್ಯ ಕರ್ಫ್ಯೂ': ಜಿಲ್ಲಾಧಿಕಾರಿಗಳಿಗೆ ಅಧಿಕಾರ; ಸರಕಾರ ಆದೇಶ
ಬೆಂಗಳೂರು, ಸೆ. 9: `ಕೋವಿಡ್ ಪಾಸಿಟಿವಿಸಿ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ರಾಜ್ಯದ ಗಡಿ ಜಿಲ್ಲೆಗಳಾದ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನ ಜಿಲ್ಲೆಗಳಲ್ಲಿ `ವಾರಾಂತ್ಯದ ಕರ್ಫ್ಯೂ' ತೆರವುಗೊಳಿಸುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಗುರುವಾರ ಆದೇಶ ಹೊರಡಿಸಿದ್ದಾರೆ.
ಆದರೆ, ಕೋವಿಡ್ ಸೋಂಕಿನ ದೃಢ ಪ್ರಮಾಣ ಹೆಚ್ಚಳವಾದರೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪರಿಸ್ಥಿತಿಯನ್ನು ಖುದ್ದು ಅವಲೋಕಿಸಿ ಅಗತ್ಯಬಿದ್ದರೆ `ವಾರಂತ್ಯದ ಕರ್ಫ್ಯೂ'ವನ್ನು ಜಾರಿಗೊಳಿಸಬಹುದಾಗಿದೆ ಎಂದು ರವಿಕುಮಾರ್ ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಸರಾಸರಿ ಕೋವಿಡ್ ಸೋಂಕಿನ ದೃಢ ಪ್ರಮಾಣ 0.73ರಷ್ಟಿದೆ. ಈ ಹಿಂದೆ ಆಗಸ್ಟ್ 30ರಂದು ಆದೇಶ ಹೊರಡಿಸಿ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನ ಜಿಲ್ಲೆಗಳಲ್ಲಿ ಕೋವಿಡ್ ಪಾಜಿಟಿವಿಸಿ ದರ ಶೇ.2ಕ್ಕಿಂತ ಹೆಚ್ಚಿದ್ದ ಹಿನ್ನೆಲೆಯಲ್ಲಿ ವಾರಂತ್ಯದ ಕರ್ಫ್ಯೂ ಸಹಿತ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಲಾಗಿತ್ತು. ಆದರೆ, ಇದೀಗ ಕೋವಿಡ್ ದೃಢ ಪ್ರಮಾಣ ಕಡಿಮೆಯಾಗಿದೆ. ಆದುದರಿಂದ ಇದುವರೆಗೂ ಜಾರಿಯಲ್ಲಿದ್ದ ವಾರಾಂತ್ಯದ ಕಕರ್ಫ್ಯೂವನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ತೀರ್ಮಾನಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.
ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ರಾಜ್ಯ ಗಡಿ ಜಿಲ್ಲೆಗಳಲ್ಲಿ ಸೋಂಕು ತಡೆಗೆ ಮಾರ್ಗಸೂಚಿ ಅನ್ವಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೋವಿಡ್ ಪರೀಕ್ಷೆ ಹಾಗೂ ಲಸಿಕೆ ಅಭಿಯಾನ ಮುಂದುವರಿಸಬೇಕು ಎಂದು ಆದೇಶದಲ್ಲಿ ಸೂಚನೆ ನೀಡಲಾಗಿದೆ.