ಬೀದಿ ನಾಯಿಗಳ ಮಾರಣಹೋಮ ಪ್ರಕರಣ: ಶಿವಮೊಗ್ಗ ಜಿಲ್ಲೆಯ ಕಂಬದಾಳ ಹೊಸೂರು ಗ್ರಾ.ಪಂ. ವಿರುದ್ಧ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
ಶಿವಮೊಗ್ಗ : ಬೀದಿನಾಯಿಗಳ ಮಾರಣಹೋಮ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯ ಕಂಬದಾಳ ಹೊಸೂರು ಗ್ರಾಮ ಪಂಚಾಯತ್ ವಿರುದ್ಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಂಬದಾಳು ಬಳಿಯ ಹುಣಸೆಕಟ್ಟೆ ಗ್ರಾಮದಲ್ಲಿ 12ಕ್ಕೂ ಹೆಚ್ಚು ನಾಯಿಗಳ ಶವ ಪತ್ತೆಯಾಗಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಪ್ರಾಣಿ ಹಕ್ಕುಗಳ ಹೋರಾಟಗಾರರು ಮಂಗಳವಾರ ದೂರು ನೀಡಿದ ಬಳಿಕ ಪ್ರಕರಣ ದಾಖಲಿಸಲಾಗಿದೆ. ನಾಯಿಗಳು ನಾಪತ್ತೆಯಾಗಿದ್ದು, ಕೆಲವು ದಿನಗಳಿಂದ ಅವುಗಳ ಕೂಗು ಕೇಳಿಸುತ್ತಿಲ್ಲ ಎಂದು ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ಹೋರಾಟಗಾರರು ಹುಡುಕಾಟ ನಡೆಸಿದ್ದರು.
ಗ್ರಾಮ ಪಂಚಾಯಿತಿಯ ಆದೇಶದ ಮೇರೆಗೆ ನಾಯಿಗಳನ್ನು ಕೊಲ್ಲಲಾಗಿದೆ ಎಂದು ದೂರು ನೀಡಲಾಗಿದೆ. ಪಶು ವೈದ್ಯರ ತಂಡ ಪರಿಶೀಲನೆ ನಡೆಸುತ್ತಿದ್ದು, ವರದಿಯ ಆಧಾರದಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಪ್ರಸಾದ್ ತಿಳಿಸಿದ್ದಾರೆ.
Next Story