ಶಿವಮೊಗ್ಗ: ಪರೀಕ್ಷಾ ಶುಲ್ಕ ವಸೂಲಿಗೆ ವಿರೋಧ; ವಿ.ವಿ ಕುಲಪತಿಗಳಿಗೆ ಎನ್.ಎಸ್.ಯು.ಐ ನಿಂದ ಮನವಿ
ಎನ್.ಎಸ್.ಯು.ಐ ನಿಂದ ಮನವಿ
ಶಿವಮೊಗ್ಗ,ಸೆ.14: ಕರ್ನಾಟಕ ಸರ್ಕಾರವು 2 ಮತ್ತು 4ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷೆಯನ್ನು ಪ್ರಮೋಟ್ ಮಾಡಿದ್ದರೂ ಸಹ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ವಸೂಲಿ ಮಾಡುತ್ತಿರುವುದು ಖಂಡಿಸಿ ಎನ್.ಎಸ್.ಯು.ಐ ಶಂಕರಘಟ್ಟದಲ್ಲಿ ಕುವೆಂಪು ವಿ.ವಿ ಕುಲಪತಿಗಳಿಗೆ ಮನವಿ ಸಲ್ಲಿಸಿದೆ.
ಕರ್ನಾಟಕ ಸರ್ಕಾರವು ಪದವಿಯಲ್ಲಿ 2 ಮತ್ತು 4ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷೆಯನ್ನು ನಡೆಸದೆ ಎಲ್ಲರನ್ನು ಉತ್ತೀರ್ಣ ಗೊಳಿಸಿದೆ. ಈ ಸಂದರ್ಭದಲ್ಲಿ ಯಾವುದೇ ತರಗತಿಗಳು ಆರಂಭವಾಗಿಲ್ಲ, ಆದರು ಕೂಡ ಕುವೆಂಪು ವಿ.ವಿ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ವಸೂಲಿ ಮಾಡುತ್ತಿರುವುದು ಖಂಡನೀಯ ಎಂದು ಮನವಿದಾರರು ತಿಳಿಸಿದರು.
ಕರೋನದಂತಹ ಮಹಾಮಾರಿಯಿಂದ ಪೋಷಕರು ಕಂಗಾಲಾಗಿದ್ದಾರೆ ಇವರಿಗೆ ಸರ್ಕಾರದಿಂದ ವಿನಾಯಿತಿ ಸಿಕ್ಕರೂ ಸಹ ವಿಶ್ವವಿದ್ಯಾಲಯದಿಂದ ಸಿಗುತ್ತಿಲ್ಲ. ನಡೆಯದೇ ಇರುವ ಪರೀಕ್ಷೆಗೆ ಶುಲ್ಕ ಪಾವತಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆಮಾಡಿದ್ದಾರೆ.
ಈ ಕೂಡಲೇ ವಿದ್ಯಾರ್ಥಿಗಳಿಂದ ಪಡೆಯುತ್ತಿರುವ ಪರೀಕ್ಷಾ ಶುಲ್ಕ ವನ್ನು ನಿಲ್ಲಿಸಬೇಕು, ಈಗಾಗಲೇ ವಿದ್ಯಾರ್ಥಿಗಳಿಂದ ಪಡೆದಿರುವ ಶುಲ್ಕ ವನ್ನು ಅವರವರ ಖಾತೆಗೆ ಜಮ ಮಾಡಿಸಬೇಕು.ಇಲ್ಲವಾದರೆ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ಈ ಮೂಲಕ ಎಚ್ಚರಿಸುತಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ನೀಡುವ ಸಂದರ್ಭದಲ್ಲಿ ಎನ್.ಎಸ್.ಯು.ಐ ನ ರಾಜ್ಯ ಕಾರ್ಯದರ್ಶಿ ಬಾಲಾಜಿ, ಜಿಲ್ಲಾಕಾರ್ಯಾಧ್ಯಕ್ಷ ರವಿ ಕಾಟಿಕೆರೆ , ನಗರ ಅಧ್ಯಕ್ಷ ವಿಜಯ್ ಹಾಗೂ ಅನಿಲ್ ಮತ್ತಿತರರಿದ್ದರು.