ಬೂಸ್ಟರ್ ಡೋಸ್ ನೀಡುವ ಕುರಿತು ಆಲೋಚನೆ ಮಾಡಿಲ್ಲ: ಸಚಿವ ಆರ್.ಅಶೋಕ್
ಬೆಂಗಳೂರು, ಸೆ.17: ಮುಂಬೈ ಮಾದರಿ ರಾಜ್ಯದಲ್ಲೂ ಕೋವಿಡ್ ವಾರಿಯರ್ಸ್ಗಳಿಗೆ ಮೂರನೇ ಡೋಸ್(ಬೂಸ್ಟರ್) ನೀಡುವ ಕುರಿತು ಆಲೋಚನೆ ಮಾಡಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಶುಕ್ರವಾರ ನಗರದ ಗೆದ್ದಲಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಬಿಬಿಎಂಪಿ ವತಿಯಿಂದ ಹಮ್ಮಿಕೊಂಡಿರುವ ಬೃಹತ್ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಮುಂಬೈನಲ್ಲಿ ಬೂಸ್ಟರ್ ಡೋಸ್ ನೀಡಿರುವ ಕುರಿತು ವರದಿಯಾಗಿದೆ. ಆದರೆ ಈ ಬಗ್ಗೆ ಸ್ಪಷ್ಟತೆ ಇಲ್ಲ. ಕೇಂದ್ರ ಸರಕಾರ ಇದರ ಕುರಿತು ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಮತ್ತೊಂದೆಡೆ ಆರೋಗ್ಯ ತಜ್ಞರಲ್ಲೂ ಭಿನ್ನ ಅಭಿಪ್ರಾಯಗಳಿದ್ದು, ಡೋಸ್ ನೀಡುವುದಕ್ಕೆ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಲಸಿಕಾ ಅಭಿಯಾನ ಆಯೋಜಿಸುವ ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದ ಅವರು, ಇದೇ ವಾರ್ಷಿಕ ಸಾಲಿನ ಡಿಸೆಂಬರ್ ಅಂತ್ಯದ ವೇಳೆ ಪ್ರತಿಯೊಬ್ಬರು ಕೋವಿಡ್ ಸಂಬಂಧ ಎರಡನೆ ಡೋಸ್ ಪಡೆಯಬೇಕೆಂಬುದು ನಮ್ಮ ಗುರಿಯಾಗಿದೆ ಎಂದರು.