11ನೇ ತರಗತಿಯ ಭೌತಿಕ ಪರೀಕ್ಷೆ ನಡೆಸುವ ಕೇರಳ ಸರಕಾರದ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂ
ಹೊಸದಿಲ್ಲಿ,ಸೆ.17: ಹನ್ನೊಂದನೇ ತರಗತಿಗೆ ಭೌತಿಕ ಪರೀಕ್ಷೆ ನಡೆಸುವ ಕೇರಳ ಸರಕಾರದ ನಿರ್ಧಾರವನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ.
ಕೇರಳ ಸರಕಾರವು ವಿವರವಾದ ಅಫಿಡವಿಟ್ ಅನ್ನು ಸಲ್ಲಿಸಿದೆ ಮತ್ತು ಕೋವಿಡ್ ಶಿಷ್ಟಾಚಾರಕ್ಕೆ ಸಂಬಂಧಿಸಿದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅದು ತೆಗೆದುಕೊಳ್ಳಲಿದೆ ಎಂದು ತಿಳಿಸಿದ ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್ ಮತ್ತು ಸಿ.ಟಿ.ರವಿಕುಮಾರ ಅವರ ಪೀಠವು,‘ಸರಕಾರವು ನೀಡಿರುವ ವಿವರಣೆ ನಮಗೆ ತೃಪ್ತಿಯನ್ನುಂಟು ಮಾಡಿದೆ. ಪರೀಕ್ಷೆಗೆ ಹಾಜರಾಗುವ ಎಳೆಯ ವಯಸ್ಸಿನ ವಿದ್ಯಾರ್ಥಿಗಳಿಗೆ ಯಾವುದೇ ಅಹಿತಕರ ಸ್ಥಿತಿ ಎದುರಾಗದಂತೆ ಎಲ್ಲ ಮುನ್ನೆಚ್ಚರಿಕೆ ಮತ್ತು ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಲಿದ್ದಾರೆ ’ ಎಂದು ಹೇಳಿತು.
‘ಸೆಪ್ಟೆಂಬರ್ ವೇಳೆಗೆ ಕೋವಿಡ್ ಮೂರನೇ ಅಲೆಯ ಸಂಭವನೀಯತೆ ಇದ್ದರಿಂದ ನಾವು ಹಿಂದಿನ ಸಂದರ್ಭಗಳಲ್ಲಿ ಹಸ್ತಕ್ಷೇಪ ಮಾಡಿದ್ದೆವು. ಆದರೆ ಮೂರನೇ ಅಲೆ ತಕ್ಷಣಕ್ಕೆ ಉಂಟಾಗುವುದಿಲ್ಲ ’ ಎಂದು ಪೀಠವು ಹೇಳಿತು.
ಆನ್ಲೈನ್ ಪರೀಕ್ಷೆ ನಡೆಸುವುದರಿಂದ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಕೂಡ ಹೊಂದಿರದ ಭಾರೀ ಸಂಖ್ಯೆಯ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಹಲವಾರು ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕ ಅಥವಾ ಮೊಬೈಲ್ ಡಾಟಾ ಲಭ್ಯವಾಗುತ್ತಿಲ್ಲ ಮತ್ತು ಅಂತಹ ವಿದ್ಯಾರ್ಥಿಗಳಿಗೆ ಆನಲೈನ್ ಪರೀಕ್ಷೆ ಬರೆಯಲು ಎಂದಿಗೂ ಸಾಧ್ಯವಾಗುವುದಿಲ್ಲ ಎಂದು ರಾಜ್ಯ ಸರಕಾರವು ತನ್ನ ಅಫಿಡವಿಟ್ನಲ್ಲಿ ತಿಳಿಸಿತ್ತು.
ಸೆ.3ರಂದು ರಾಜ್ಯದಲ್ಲಿ ಆತಂಕಕಾರಿ ಸ್ಥಿತಿಯಿದೆ ಎಂದು ಹೇಳಿದ್ದ ಸವೋಚ್ಚ ನ್ಯಾಯಾಲಯವು ಸೆ.6ರಿಂದ 11ನೇ ತರಗತಿಗೆ ಆಫ್ಲೈನ್ ಪರೀಕ್ಷೆಗಳನ್ನು ನಡೆಸುವ ಕೇರಳ ಸರಕಾರದ ನಿರ್ಧಾರಕ್ಕೆ ಒಂದು ವಾರದ ತಡೆಯಾಜ್ಞೆಯನ್ನು ನೀಡಿತ್ತು.