ಕ್ರಿಮಿನಲ್ ಲೂಟ್ ಬೇಡ ಎಂದರೆ `ಕಾಂಗ್ರೆಸ್ ಲೂಟ್ ಎಂದು ಹೇಳಲೇ:ಮುಖ್ಯಮಂತ್ರಿ ಬೊಮ್ಮಾಯಿ, ಸಿದ್ದರಾಮಯ್ಯ ಮಧ್ಯೆ ವಾಕ್ಸಮರ
ವಿಧಾನಸಭೆ ಅಧಿವೇಶನ
ಬೆಂಗಳೂರು, ಸೆ. 20: `ಬೆಲೆ ಏರಿಕೆ ಕ್ರಿಮಿನಲ್ ಲೂಟ್ ಎನ್ನುವುದು ಬೇಡ ಎಂದರೆ ನಾನು `ಕಾಂಗ್ರೆಸ್ ಲೂಟ್' ಎಂದು ಹೇಳಲೇ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಷಯಕ್ಕೆ ಸಂಬಂಧಿಸಿದಂತೆ ನಿಯಮ 69ರಡಿಯಲ್ಲಿ ನಡೆದ ಸುದೀರ್ಘ ಚರ್ಚೆಗೆ ಉತ್ತರ ನೀಡಿದ ಅವರು, `ಬೆಲೆ ಏರಿಕೆ ಕುರಿತ ಚರ್ಚೆ ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಇದೊಂದು ನಿರಂತರ ಪ್ರಕ್ರಿಯೆ. ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ಬೆಲೆಗಳು ಏರಿಕೆಯಾಗಿವೆ ಎಂಬುದು ಸುಳ್ಳು ಎಂದು ನಿರಾಕರಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ವಾಜಪೇಯಿ ಅವರು `ಕ್ರಿಮಿನಲ್ ಲೂಟ್' ಪದವನ್ನು ಉಲ್ಲೇಖಿಸಿದ್ದಾರೆ. ಆದರೆ, ನಾನು ಅದೇ ಮಾತನ್ನು ಕ್ರಿಮಿನಲ್ ಲೂಟ್ ಎನ್ನುವ ಬದಲಿಗೆ ಕಾಂಗ್ರೆಸ್ ಲೂಟ್ ಎಂದು ಕರೆಯಬಹುದು. ಆದರೆ, ಎಲ್ಲ ಅವಧಿಯಲ್ಲಿಯೂ ಬೆಲೆ ಏರಿಕೆ ಮಾಡಲಾಗಿದೆ ಎಂದು ಟೀಕಿಸಿದರು.
ಸಿದ್ದರಾಮಯ್ಯನವರ ಅವಧಿಯಲ್ಲಿಯೂ ಪೆಟ್ರೋಲ್, ಡೀಸೆಲ್ ಸಹಿತ ಅಗತ್ಯ ವಸ್ತುಗಳ ಬೆಲೆ ಎಷ್ಟು ಪಟ್ಟು ಹೆಚ್ಚಾಗಿದೆ ಎಂಬ ಅಂಕಿ-ಅಂಶಗಳು ನನ್ನ ಬಳಿಯೂ ಇವೆ. ಆದರೆ, ಇದೀಗ ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ನಮ್ಮ ವಿರುದ್ಧ ಆರೋಪ ಮಾಡುವುದು ನೈತಿಕತೆ ನಿಮಗಿಲ್ಲ ಎಂದು ಸಿಎಂ ವಾಗ್ದಾಳಿ ನಡೆಸಿದರು.