ನನ್ನ ಕ್ಷೇತ್ರದಲ್ಲಿ ಒಂದೇ ಒಂದು ಮನೆ ಕೊಡಿಸಲು ಸಾಧ್ಯವಾಗಿಲ್ಲ: ಸಿದ್ದರಾಮಯ್ಯ
ಬೆಂಗಳೂರು, ಸೆ. 20: `ಪ್ರತಿಪಕ್ಷ ನಾಯಕನಾಗಿ ನಾನು ಪ್ರತಿನಿಧಿಸುವ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ವರ್ಷಗಳಿಂದ ವಸತಿ ರಹಿತರಿಗೆ ಒಂದೇ ಒಂದು ಮನೆ ಕೊಡಿಸಲು ಸಾಧ್ಯವಾಗಿಲ್ಲ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಪಕ್ಷೇತರ ಸದಸ್ಯ ಶರತ್ ಬಚ್ಚೇಗೌಡ ಕೇಳಿದ ಪ್ರಶ್ನೆಗೆ ವಸತಿ ಸಚಿವ ವಿ.ಸೋಮಣ್ಣ ನೀಡಿದ ಉತ್ತರದಿಂದ ಅಸಮಾಧಾನಗೊಂಡ ಅವರು, ನಾನು ಸಿಎಂ ಆಗಿದ್ದ 5 ವರ್ಷದ ಅವಧಿಯಲ್ಲಿ ಒಟ್ಟು 5ಲಕ್ಷ ಮನೆಗಳನ್ನು ನಿರ್ಮಿಸಲಾಗಿತ್ತು. ಕೊನೆಯ ವರ್ಷದಲ್ಲಿ ಬೆಂಗಳೂರಿನಲ್ಲಿ 1ಲಕ್ಷ ಮನೆ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿತ್ತು.
ಆದರೆ, ಮನೆ ಮಂಜೂರಾತಿಯಲ್ಲಿ ಅಕ್ರಮ ಆಗಿದ್ದರೆ ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ನಿರ್ಮಾಣ ಹಂತದಲ್ಲಿದ್ದ ಎಲ್ಲ ಮನೆಗಳಿಗೆ ಅನುದಾನ ಸ್ಥಗಿತಗೊಳಿಸಿದ್ದು, ಅದನ್ನು ಕೂಡಲೇ ನೀಡಿ ಮನೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರ ನೀಡಿದ ಸಚಿವ ಸೋಮಣ್ಣ, ಸ್ಥಗಿತಗೊಳಿಸಿರುವ ಮನೆಗಳನ್ನು ಪೂರ್ಣಗೊಳಿಸಲು ಸರಕಾರ ಕ್ರಮ ವಹಿಸಲಿದೆ. ಅಲ್ಲದೆ, ಈಗಾಗಲೇ ಸಿಎಂ 4 ಲಕ್ಷ ಮನೆ ನಿರ್ಮಿಸುವ ಭರವಸೆ ನೀಡಿದ್ದು, ಆ ಪ್ರಕ್ರಿಯೆ ಶೀಘ್ರವೇ ಆರಂಭಿಸಲಿದ್ದು, ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಸರಕಾರ ಕ್ರಮ ಮುಂದಾಗಲಿದೆ ಎಂದರು.
2019-2020ನೆ ಸಾಲಿನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 86 ಸಾವಿರ ಮನೆಗಳ ಗುರಿಯನ್ನು ನೀಡಿದ್ದು, ಸದರಿ ಗುರಿಗೆ ಎದುರಾಗಿ 42,267 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಹಾಗೂ 2020-21ನೆ ಸಾಲಿಗೆ ಕೇಂದ್ರ ಸರಕಾರವು 1,51,715 ಮನೆಗಳ ಪೈಕಿ ಪ್ರತಿ ಗ್ರಾ.ಪಂ.ಗೆ 20ರಂತೆ 1,22,680 ಗ್ರಾಮ ಪಂಚಾಯಿತಿಗಳಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಪ್ರಗತಿಯಲ್ಲಿರುವ ಮನೆಗಳಿಗೆ ಅನುದಾನ ಸ್ಥಗಿತಗೊಳಿಸಿದ್ದು, ಆ ಮನೆಗಳನ್ನು ಯಾವಾಗ ಪೂರ್ಣಗೊಳಿಸುತ್ತೀರಿ ಎಂದು ಸರಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಸಿದ್ದರಾಮಯ್ಯ, ಸಿಎಂ ಅವರಿಂದ ಹೆಚ್ಚಿನ ಹಣ ಪಡೆದು ವಸತಿ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಿ ಎಂದು ಸಲಹೆ ನೀಡಿದರು. ಬಳಿಕ ಪ್ರತಿಕ್ರಿಯಿಸಿದ ಸೋಮಣ್ಣ, ಈ ಕುರಿತು ಪರಿಶೀಲನೆ ನಡೆಸಿ ಕ್ರಮ ವಹಿಸಲಾಗುವುದು ಎಂದರು.
ಆಡಳಿತ ಒಂದು ನಿರಂತರ ಪ್ರಕ್ರಿಯೆ
`ಅನ್ನಭಾಗ್ಯ ಯೋಜನೆಯಡಿ 7 ಕಿಲೋ ಅಕ್ಕಿ ಹೊಸ ಘೋಷಣೆ ಆಗಿರಲಿಲ್ಲ, ಹಿಂದಿನ ಎರಡು ವರ್ಷವೂ ಕೊಟ್ಟಿದ್ದೆವು. ಅದನ್ನು ಸಮ್ಮಿಶ್ರ ಸರಕಾರ ಮುಂದುವರಿಸಿದೆ. ಅದು ಎಚ್.ಡಿ.ಕುಮಾರಸ್ವಾಮಿ ಅವರು ಕೈಯಿಂದ ಕೊಟ್ಟದ್ದಲ್ಲ, ಸಿಎಂ ಆಗಿ ಕೊಟ್ಟದ್ದು. ಸಮ್ಮಿಶ್ರ ಸರಕಾರ ನಮ್ಮದೂ ಆಗಿತ್ತು. 7 ಕಿಲೋ ಅಕ್ಕಿಗೆ ಬಜೆಟ್ನಲ್ಲಿ ಹಣ ಇಟ್ಟಿಲ್ಲ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ನಿರಾಧಾರವಾದುದು. ಬಜೆಟ್ನಲ್ಲಿ ನೀಡಿದ ಹಣ ಕಡಿಮೆಯಾದರೆ ಪೂರಕ ಬಜೆಟ್ನಲ್ಲಿ ನೀಡುವುದು ಸಂಪ್ರದಾಯ. ಅದನ್ನೇ ಅವರು ಕೊಟ್ಟಿದ್ದಾರೆ. `ಆಡಳಿತ ಒಂದು ನಿರಂತರ ಪ್ರಕ್ರಿಯೆ'
-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ