ಮುಂಬರುವ ವಿಧಾನಸಭೆ ಚುನಾವಣೆಗೆ ಸೆ. 27ರಂದು 140 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಹೆಚ್.ಡಿ.ಕುಮಾರಸ್ವಾಮಿ
ಹೆಚ್.ಡಿ.ಕುಮಾರಸ್ವಾಮಿ
ಶಿವಮೊಗ್ಗ, ಸೆ.21: ಮುಂಬರುವ ವಿಧಾನಸಭಾ ಚುನಾವಣೆಯ ಸಿದ್ಧತೆಗೆ ಇದೇ ತಿಂಗಳ 27 ರಂದು ಬೆಂಗಳೂರಿನಲ್ಲಿ ಜೆಡಿಯಸ್ ಪಕ್ಷದ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, 140 ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಲಾಗುವುದು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಭದ್ರಾವತಿಯ ಗೋಣಿಬೀಡಿನಲ್ಲಿರುವ ಅಪ್ಪಾಜಿಗೌಡರ ಪುತ್ಥಳಿ ಅನಾವರಣದ ಬಳಿಕ ಮುಂದಿನ ಚುನಾವಣೆಗೆ ಭದ್ರಾವತಿ ಕ್ಷೇತ್ರದ ಅಭ್ಯರ್ಥಿಯಾಗಿ ಶಾರದಾ ಅಪ್ಪಾಜಿ ಅವರನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ.
ಬಳಿಕ ಮಾತನಾಡಿದ ಅವರು, ''ಭದ್ರಾವತಿ ಕ್ಷೇತ್ರದ ಜನರ ಹಾಗೂ ಅಪ್ಪಾಜಿಗೌಡರ ಬೆಂಬಲಿಗರ ಧ್ವನಿಗೆ ನಾನು ಬೆಲೆ ಕೊಡುತ್ತೇನೆ. ಈಗಾಗಲೇ ಕ್ಷೇತ್ರದ ಜನರೇ ತಮ್ಮ ಅಭ್ಯರ್ಥಿ ಯಾರೆಂದು ನಿರ್ಧರಿಸಿದ್ದಾರೆ. ಹಾಗೆಯೇ ಸಹೋದರಿ ಶಾರದಾ ಅಪ್ಪಾಜಿಗೌಡರನ್ನು ಮುಂದಿನ ಅಭ್ಯರ್ಥಿ ಮಾಡುತ್ತೇವೆ' ಎಂದರು.
ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಧೇಯಕ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ವಿಧೇಯಕ ಜಾರಿಗೆ ತರಲು ಹೊರಟಿದೆ. ಬಿಜೆಪಿ ಪಕ್ಷ ಒಂದು ಕಡೆ ಹಿಂದುತ್ವದ ಹೆಸರು ಹೇಳುತ್ತಾರೆ. ಮತ್ತೊಂದು ಕಡೆ ಅವರದ್ದೇ ಸರ್ಕಾರದಲ್ಲಿ ದೇವಸ್ಥಾನವನ್ನು ಒಡೆಯುತ್ತಾರೆ. ವಿಧೇಯಕ ತರಲು ಹೊರಟಿರುವ ಮೊದಲೇ ಎಚ್ಚೇತ್ತುಕೊಳ್ಳಬೇಕಿತ್ತು. ವಿಧೇಯಕದ ಮೂಲಕ ಮತ್ತೊಂದು ಡ್ರಾಮಾ ಪ್ರಾರಂಭಿಸಿದ್ದಾರೆ ಎಂದರು.