ಪಠ್ಯಪುಸ್ತಕಗಳ ಪರಿಶೀಲನೆಗೆ ತಜ್ಞರಲ್ಲದವರ ನೇಮಕಕ್ಕೆ ವಿರೋಧ
ಬೆಂಗಳೂರು, ಸೆ.21: ಸಾರ್ವಜನಿಕ ಶಿಕ್ಷಣ ಇಲಾಖೆಯ ಪಠ್ಯಪುಸ್ತಕಗಳ ಪರಿಶೀಲನೆಗೆ ಶಿಕ್ಷಣ ಕ್ಷೇತ್ರದ ವಿಷಯ ತಜ್ಞರಲ್ಲದ, ಬಿಜೆಪಿ ಪಕ್ಷದ ಬೌದ್ಧಿಕ ತಂಡದ ಸದಸ್ಯರಾದ ರೋಹಿತ್ ಚಕ್ರತೀರ್ಥರನ್ನು ರಾಜ್ಯ ಸರಕಾರವು ನೇಮಕ ಮಾಡಿದೆ, ಅದಕ್ಕೆ ನಮ್ಮ ವಿರೋಧವಿದೆ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಅಧ್ಯಕ್ಷರಾದ ಅಲ್ಲಮಪ್ರಭು ಬೆಟ್ಟದೂರು ಹೇಳಿದ್ದಾರೆ.
ಈ ಹಿಂದೆ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ 172 ಸದಸ್ಯರನ್ನೊಳಗೊಂಡ 27 ವಿಷಯವಾರು ಸಮಿತಿಗಳ ಶಿಫಾರಸ್ಸಿನ ಮೇರೆಗೆ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಿ ಪ್ರಜಾತಾಂತ್ರಿಕ, ವೈಜ್ಞಾನಿಕ ಪಠ್ಯಕ್ರಮ ರಚಿಸಲಾಗಿತ್ತು. ಇದನ್ನು ವಿಷಯ ಪರಿಣಿತರು, ಶಿಕ್ಷಣ ತಜ್ಞರು ಮಾತ್ರವೇ ಮಾಡುವಂಥದ್ದಾಗಿದ್ದು, ಬಿಜಿಪಿ ಸರಕಾರವು ಕೋಮುವಾದಿ ವಿಚಾರಕ್ಕನುಗುಣವಾಗಿ ಪಠ್ಯವನ್ನ ತಿರುಚಿ, ವಿಷಬೀಜ ಬಿತ್ತಿ, ವಿದ್ಯಾರ್ಥಿಗಳಲ್ಲಿ ಕುರುಡು ನಂಬಿಕೆ, ಅಂಧಶ್ರದ್ಧೆ ಬೆಳೆಸಿ, ಜನಗಳ ಐಕ್ಯತೆ ಸಾಮರಸ್ಯ, ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವದ ಮೇಲೆ ಗದಾಪ್ರಹಾರ ಮಾಡುತ್ತಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ನಮ್ಮ ನವೋದಯ ಚಿಂತಕರು ಮತ್ತು ಸಾಹಿತಿಗಳು ವೈಜ್ಞಾನಿಕ, ಪ್ರಗತಿಪರ, ಪ್ರಜಾತಾಂತ್ರಿಕ, ಕೋಮು ಸಾಮರಸ್ಯ ಮೌಲ್ಯಗಳು ಹಾಗೂ ಧರ್ಮನಿರಪೇಕ್ಷ-ಪ್ರಜಾತಾಂತ್ರಿಕ ಶಿಕ್ಷಣವನ್ನು ಎತ್ತಿಹಿಡಿದಿದ್ದರು. ಆದರೆ ರಾಜ್ಯ ಸರಕಾರ ಫ್ಯಾಶಿಸ್ಟ್ವಾದಿ ಹಾಗೂ ಅಪ್ರಜಾತಾಂತ್ರಿಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೀಗಾಗಿ ಶಿಕ್ಷಕರು, ವಿದ್ಯಾರ್ಥಿಗಳು ಇದರ ವಿರುದ್ಧ ಧ್ವನಿ ಎತ್ತಬೇಕು ಎಂದು ಅಲ್ಲಮಪ್ರಭು ಬೆಟ್ಟದೂರು ಕರೆ ಕೊಟ್ಟಿದ್ದಾರೆ.