ಆನೇಕಲ್; ಕೆಮಿಕಲ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ: ನಾಲ್ವರು ಗಂಭೀರ, ಹಲವರಿಗೆ ಗಾಯ
ಬೆಂಗಳೂರು, ಸೆ.24: ಬೆಂಗಳೂರಿನ ಅತ್ತಿಬೆಲೆಯ ಕೈಗಾರಿಕಾ ಪ್ರದೇಶದಲ್ಲಿರುವ ಕೆಮಿಕಲ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಹಲವರು ಗಾಯಗೊಂಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಗ್ನಿಶಾಮಕ ದಳದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಡ್ಡರಪಾಳ್ಯದಲ್ಲಿರುವ ಲೇಕ್ ಕಂಪೆನಿಯಲ್ಲಿ ಶುಕ್ರವಾರ ಮಧ್ಯಾಹ್ನ 1.20ರ ಸುಮಾರಿಗೆ ಬಾಯ್ಲರ್ ಸ್ಫೋಟಗೊಂಡಿದ್ದು 4 ಕಿ.ಮೀಟರ್ವರೆಗೆ ಹೊಗೆ ವ್ಯಾಪಿಸಿದೆ. ಅತ್ತಿಬೆಲೆಯ ಜನರಲ್ಲಿ ಆತಂಕ ಎದುರಾಗಿದೆ. ಅತ್ತಿಬೆಲೆ, ವಡ್ಡರಪಾಳ್ಯ ಮಾಯಸಂದ್ರ, ಮುಚ್ಚೆಂದ, ಕಂಬಳೀಪುರ, ಇಂಚಗೂರು, ಮಯಾಸಂದ್ರ, ಬಾಂಡೇಪುರವರೆಗೂ ಕೆಮಿಕಲ್ ಘಾಟು ಹಬ್ಬಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ಉಂಟಾಗಿದೆ.
ಲೇಕ್ ಕೆಮಿಕಲ್ ಕಾರ್ಖಾನೆಯಿಂದ ಫಾರ್ಮಾಸಿಟಿಕಲ್ ವಸ್ತುಗಳ ಉತ್ಪಾದನೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ಮಿಥೇನಾಲ್ ಹಾಗೂ ಬೇರೆ ಬೇರೆ ರಾಸಾಯನಿಕಗಳಿಂದ ಉತ್ಪನ್ನಗಳ ತಯಾರಿಕೆ ಮಾಡಲಾಗುತ್ತದೆ. ರಾಜಸ್ಥಾನಿ ಮೂಲದವರ ಒಡೆತನದ ಲೇಕ್ ಕೆಮಿಕಲ್ಸ್ ಕಂಪೆನಿ ಇದಾಗಿದೆ. ಬಾಯ್ಲರ್ ಸ್ಫೋಟದ ಕಾರಣ ತಿಳಿಯಲು ಅತ್ತಿಬೆಲೆ ಪೊಲೀಸರು ತಜ್ಞರ ಮೊರೆ ಹೋಗಿದ್ದಾರೆ.
ಅತ್ತಿಬೆಲೆಯ ಕೈಗಾರಿಕಾ ಪ್ರದೇಶದಲ್ಲಿರುವ ಕೆಮಿಕಲ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡಿದ್ದರಿಂದ ನಾಲ್ವರಿಗೆ ಗಂಭೀರ ಗಾಯಗಳು ಆಗಿವೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಫೋಟದ ಕುರಿತು ತನಿಖೆ ಕೈಗೊಂಡಿದ್ದೇನೆ.’
-ಕೋನ ವಂಶಿ ಕೃಷ್ಣ, ಬೆಂ. ಗ್ರಾಮಾಂತರ ಎಸ್ಪಿ