ನಂಜನಗೂಡು ತಹಶೀಲ್ದಾರ್ ವರ್ಗಾವಣೆ ವೈಯಕ್ತಿಕವಾಗಿ ನನಗೆ ಬೇಸರ ತರಿಸಿದೆ: ಶಾಸಕ ಹರ್ಷವರ್ಧನ್
"ತಹಶೀಲ್ದಾರ್ ವರ್ಗಾಣೆಯಿಂದ ಸಂಸದ ಪ್ರತಾಪ್ ಸಿಂಹ ಅವರಿಗೆ ಸಂತೃಪ್ತಿಯಾಗಿದ್ದರೆ ಒಳ್ಳೆಯದು"
ಶಾಸಕ ಹರ್ಷವರ್ಧನ್
ಮೈಸೂರು: ನಂಜನಗೂಡು ತಹಶೀಲ್ದಾರ್ ಮೋಹನ್ ಕುಮಾರಿ ವರ್ಗಾವಣೆ ನನಗೆ ವೈಯಕ್ತಿಕವಾಗಿ ಬೇಸರ ತರಿಸಿದೆ ಎಂದು ನಂಜನಗೂಡು ಶಾಸಕ ಹರ್ಷವರ್ಧನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮಂಗಳವಾರ “ವಾರ್ತಾಭಾರತಿ”ಯೊಂದಿಗೆ ಮಾತನಾಡಿದ ಅವರು, ಓರ್ವ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿ ಮೋಹನ್ ಕುಮಾರಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ವರ್ಗಾವಣೆ ನನಗೆ ವೈಯಕ್ತಿಕವಾಗಿ ಬೇಸರ ತರಿಸಿದೆ. ಆದರೆ ಮುಖ್ಯಮಂತ್ರಿಗಳೇ ಸ್ವತಹ ಕ್ರಮ ಕೈಗೊಂಡಿರುವುದರಿಂದ ನಾನು ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದರು.
ಸಂಸದ ಪ್ರತಾಪ್ ಸಿಂಹ ಅವರಿಗೆ ನನ್ನ ಮತ್ತು ನನ್ನ ಕ್ಷೇತ್ರದ ಬಗ್ಗೆ ಅಪಾರ ಪ್ರೀತಿ, ಹಾಗಾಗಿಯೇ ಅವರು ಪದೇ ಪದೇ ನನ್ನ ಕ್ಷೇತ್ರದ ಬಗ್ಗೆ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅವರಿಗೆ ತಹಶೀಲ್ದಾರ್ ವರ್ಗಾವಣೆಯಿಂದ ಸಂತೃಪ್ತಿಯಾಗಿದ್ದರೆ ಒಳ್ಳೆಯದಾಗಲಿ ಎಂದು ಹೇಳಿದರು.
ಈಗಾಗಲೇ ಹುಚ್ಚಗಣಿ ಗ್ರಾಮಸ್ಥರೊಂದಿಗೆ ನಾನು ಮಾತುಕತೆ ನಡೆಸಿ ಬೇರೆ ಕಡೆ ಆಧಿಶಕ್ತಿ ಮಹದೇವಮ್ಮ ದೇವಸ್ಥಾನ ಸ್ಥಾಪನೆಗೆ ಅವಕಾಶ ಕಲ್ಪಿಸಿದ್ದೆ, ದೇವಾಲಯ ನಿರ್ಮಾಣಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದೆ. ಇದಕ್ಕೆ ಅಲ್ಲಿನ ಗ್ರಾಮಸ್ಥರು ಸಹಮತ ಸೂಚಿಸಿದ್ದರು. ಆದರೆ ಏಕಾಏಕಿ ತಹಶೀಲ್ದಾರ್ ವರ್ಗಾವಣೆ ನನಗೆ ನೋವುಂಟು ಮಾಡಿದೆ ಎಂದು ಹೇಳಿದರು.