ಅರ್ಬಾಝ್ ಕೊಲೆ ಪ್ರಕರಣ: ಶ್ರೀರಾಮಸೇನೆ ಮುಖಂಡ ಸೇರಿದಂತೆ 10 ಮಂದಿಯನ್ನು ಬಂಧಿಸಿದ ಪೊಲೀಸರು
"ಯುವತಿಯ ಪೋಷಕರು ಸುಪಾರಿ ನೀಡಿ ಕೊಲೆ ಮಾಡಿಸಿದ್ದಾರೆ"
ಬೆಳಗಾವಿ: ಅರ್ಬಾಝ್ ಅಫ್ತಾಬ್ ಮುಲ್ಲಾ ಎಂಬ ೨೪ ವರ್ಷದ ಯುವಕನನ್ನು ಅಮಾನುಷ ರೀತಿಯಲ್ಲಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ೧೦ ಮಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಪುತ್ರಿಯೊಂದಿಗೆ ಅಂತರ್ಧರ್ಮೀಯ ಪ್ರೇಮ ಸಂಬಂಧದಲ್ಲಿದ್ದ ಕಾರಣ ಆತನನ್ನು ಕೊಲೆಗೈಯಲು ಯುವತಿಯ ಪೋಷಕರು ಗೂಂಡಾಗಳಿಗೆ ಸುಪಾರಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಶ್ರೀರಾಮಸೇನೆ ಹಿಂದೂಸ್ಥಾನ ಸಂಘಟನೆಯ ಮುಖಂಡ ಪುಂಡಲೀಕ ಮಹಾರಾಜ್ (39), ಕುತುಬುದ್ದೀನ್ ಅಲ್ಲಾಭಕ್ಷ್ (36), ಸುಶೀಲಾ ಈರಪ್ಪ (42), ಮಾರುತಿ ಪ್ರಹ್ಲಾದ್ (30), ಮಂಜುನಾಥ್ ತುಕಾರಾಮ (25), ಗಣಪತಿ ಜ್ಞಾನೇಶ್ವರ (27), ಈರಪ್ಪ ಬಸವಣ್ಣಿ ಕುಂಬಾರ (54), ಪ್ರಶಾಂತ್ ಕಲ್ಲಪ್ಪ (28), ಪ್ರವೀಣ್ ಶಂಕರ್ ಹಾಗೂ ಶ್ರೀಧರ್ ಮಹಾದೇವ ದೋನಿ ಎಂದು ಗುರುತಿಸಲಾಗಿದೆ.
ಸೆಪ್ಟೆಂಬರ್ 27ರಿಂದ ಅರ್ಬಾಝ್ ಕಾಣೆಯಾಗಿದ್ದ. ಅಂದೇ ರಾತ್ರಿ ವೇಳೆ ಆತನ ಮೃತದೇಹ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ರೈಲ್ವೆ ಹಳಿಯಲ್ಲಿ ಪತ್ತೆಯಾಗಿತ್ತು. ಅಂತರ್ ಧರ್ಮೀಯ ಸಂಬಂಧದ ಕಾರಣದಿಂದಲೇ ಆತನನ್ನು ಕೊಲೆಗೈಯಲಾಗಿದೆ ಎಂದು ಅರ್ಬಾಝ್ ತಾಯಿ ನಜೀಮಾ ಆರೋಪಿಸಿದ್ದರು.