ಫಿರಂಗಿ ಗಾಡಿಗಳಿಂದ ಸಿಡಿದ ಕುಶಾಲತೋಪು: ಮತ್ತೆ ಬೆದರಿದ ಅಶ್ವತ್ಥಾಮ, ಗೋಪಾಲಸ್ವಾಮಿ ಲಕ್ಷ್ಮಿ ಆನೆಗಳು
ಮೈಸೂರು.ಅ.8: ವಿಶ್ವವಿಖ್ಯಾತ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಫಿರಂಗಿ ಗಾಡಿಗಳಿಂದ ಕುಶಾಲತೋಪು ಸಿಡಿಸುವ 3ನೇ ಹಂತದ ತಾಲೀಮು ನಡೆಯಿತು.
ನಗರದ ಕೋಟೆ ಮಾರಮ್ಮ ದೇವಸ್ಥಾನದ ಪಕ್ಕದ ಮೈದಾನದಲ್ಲಿ ಶುಕ್ರವಾರ ಕುಶಾಲತೋಪು ತಾಲೀಮು ನಡೆಸಲಾಯಿತು. ಮತ್ತೆ ಮೂರು ಆನೆಗಳು ಬೆದರಿವೆ. ಅಶ್ವತ್ಥಾಮ, ಗೋಪಾಲಸ್ವಾಮಿ, ಲಕ್ಷ್ಮಿ ಬೆದರಿದ್ದು, ಗಜಪಡೆ ಹಾಗೂ ಅಶ್ವಗಳು ಬೆದರದಂತೆ ಫಿರಂಗಿಗಳ ಮೂಲಕ ಕುಶಾಲತೋಪುಗಳನ್ನು ಸಿಡಿಸುವ ತಾಲೀಮು ನಡೆಸಲಾಗಿತ್ತು.
ಇಂದು ಸಹ 7 ಫಿರಂಗಿ ಗಾಡಿಗಳಿಂದ 21 ಕುಶಾಲತೋಪುಗಳನ್ನು ಸಿ ಎ ಆರ್ ಸಿಬ್ಬಂದಿಗಳು ಸಿಡಿಸಿದರು. ಕುಶಾಲತೋಪುಗಳನ್ನು ಸಿಡಿಸುವ 3ನೇ ಹಂತದ ಇಂದಿನ ತಾಲೀಮು ಯಶಸ್ವಿ ಯಾಗಿದೆ. ಜಂಬೂ ಸವಾರಿ ಮೆರವಣಿಗೆಗೂ ಮುನ್ನಾ ಒಟ್ಟು ಮೂರು ಬಾರಿ ಕುಶಾಲತೋಪುಗಳನ್ನು ಸಿಡಿಸುವ ತಾಲೀಮು ನಡೆಯಲಿದೆ.
ಇದುವರೆಗೂ ಎರಡು ಬಾರಿ ತಾಲೀಮು ನಡೆದಿತ್ತು. ಮತ್ತೊಂದು ಬಾರಿ ಕುಶಾಲತೋಪುಗಳನ್ನು ಸಿಡಿಸುವ ತಾಲೀಮು ನಡೆಸಲಾಗಿದೆ. ಆನೆಗಳು, ಅಶ್ವಗಳು ಬೆದರದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಜಯದಶಮಿ ಜಂಬೂಸವಾರಿ ಮೆರವಣಿಗೆಯ ದಿನ ರಾಷ್ಟ್ರಗೀತೆ ನುಡಿಸುವ ವೇಳೆ 21 ಬಾರಿ ಕುಶಾಲತೋಪುಗಳನ್ನು ಸಿಡಿಸಿ ಗೌರವ ಸಲ್ಲಿಸಲು ಪೂರ್ವ ಸಿದ್ದತೆ ನಡೆಸಲಾಯಿತು.
ಡಿಸಿಎಫ್ ಕರಿಕಾಳನ್ ಮಾತನಾಡಿ ಜಂಬೂ ಸವಾರಿಗೆ ವಿಕ್ರಮ ಆನೆ ಬಳಸುವುದಿಲ್ಲ. ವಿಕ್ರಮ ಮದದಲ್ಲಿ ಇದ್ದಾನೆ. ಮದ ಆರೋಗ್ಯ ಸಮಸ್ಯೆಯಲ್ಲ, ನೈಸರ್ಗಿಕ ಪ್ರಕ್ರಿಯೆ. ವಿಕ್ರಮನನ್ನು ಪಟ್ಟದ ಆನೆಯಾಗಿ ಬಳಕೆ ಮಾಡುತ್ತಿದ್ದೆವು. ಜಾಸ್ತಿ ಮದ ಇರುವ ಕಾರಣಕ್ಕಾಗಿ ವಿಕ್ರಮನ ಬದಲು ಧನಂಜಯ ಮತ್ತು ಗೋಪಾಲಸ್ವಾಮಿ ಆನೆಗಳನ್ನು ಪಟ್ಟದಾನೆಯಾಗಿ ಕಳುಹಿಸುತ್ತಿದ್ದೇವೆ. ಯಶಸ್ವಿಯಾಗಿ ನಮ್ಮ ಆನೆಗಳು ಫಿರಂಗಿ ತಾಲೀಮು ಮುಗಿಸಿವೆ. ನಮಗೆ ಜಂಬೂಸವಾರಿಗೆ ಐದು ಆನೆಗಳು ಸಾಕು. ಆದರೆ ನಾವು 8 ಆನೆಗಳು ತಂದಿದ್ದು ನಗರದ ವಾತಾವರಣಕ್ಕೆ ಹೊಂದಿಕೊಳ್ಳಬೇಕೆಂದು. ಕೊನೆ ಹಂತದಲ್ಲಿ ಸಮಸ್ಯೆ ಆಗದಂತೆ ಕ್ರಮ ವಹಿಸಿದ್ದೇವೆ. ಈ ರೀತಿಯ ಸಮಸ್ಯೆ ಆಗುವ ಕಾರಣ ಮೂರು ಆನೆ ಹೆಚ್ಚವರಿಯಾಗಿ ತಂದಿದ್ದೇವೆ. ಅಭಿಮನ್ಯು ಹೆಲ್ತ್ ಚೆನ್ನಾಗಿದೆ, ಅಕ್ಕಪಕ್ಕ ಎರಡು ಹೆಣ್ಣಾನೆ ಬಳಕೆ ಆಗುತ್ತೆ.
ನಿಶಾನೆ ಆನೆ, ನೌಫತ್ ಆನೆ ಸೇರಿ ಒಟ್ಟು 5 ಆನೆ ಜಂಬೂ ಸವಾರಿಗೆ ಸಾಕು. ನಮಗೆ ಯಾವುದೇ ಆನೆಗಳಿಂದ ಸಮಸ್ಯೆ ಇಲ್ಲ. ಈವರೆಗೂ 1200 ಕೆಜಿವರೆಗೂ ತೂಕದ ತಾಲೀಮ ನಡೆಸಿದ್ದೇವೆ. ಜಂಬೂಸವಾರಿಗೆ ಸಮಸ್ಯೆ ಆಗದಂತೆ ಸ್ಟ್ಯಾಂಡ್ ಬೈ ಆನೆ ಇದೆ.ಬ್ಲಕ್ಷ್ಮಿ ಹಾಗೂ ಧನಂಜಯ ಆನೆ ಇಂದು ಫಿರಂಗಿಗೆ ಬೆದರಿದೆ. ಧನಂಜಯ ಡೋಳು, ಬ್ಯಾಂಡು ಯಾವುದಕ್ಕೂ ಹೆದರಲ್ಲ. ಕೇವಲ ಫಿರಂಗಿ ತಾಲೀಮಿಗೆ ಮಾತ್ರ ಬೆದರುತ್ತಿದ್ದಾನೆ. ನಾಳೆ ಬೆಳಗ್ಗೆ ಶ್ರೀರಂಗಪಟ್ಟಣ ದಸರಾಗೆ ಎರಡು ಆನೆ ಕಳುಹಿಸುತ್ತೇವೆ. ಗೋಪಾಲಸ್ವಾಮಿ ಹಾಗೂ ಕಾವೇರಿ ಆನೆಯನ್ನು ಮೈಸೂರಿನಿಂದ ಕಳುಹಿಸುತ್ತೇವೆ ಎಂದು ತಿಳಿಸಿದರು.